ಲಿಂಗಾಯತ ಮುಖಂಡರ ಜತೆ ಸಿಎಂ ರಹಸ್ಯ ಸಭೆ
ಲಿಂಗಾಯತ ಸ್ವತಂತ್ರ ಧರ್ಮ ಸ್ಥಾಪನೆ ಸಂಬಂಧ ಹೋರಾಟ ನಡೆಸುತ್ತಿರುವ ಲಿಂಗಾಯತ ಮುಖಂಡರ ಜತೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಗುರುವಾರ ಬೆಳಗ್ಗೆ ರಹಸ್ಯ ಮಾತುಕತೆ ನಡೆಸಿದರು ಎನ್ನಲಾಗಿದೆ.
ಬೆಂಗಳೂರು: ಲಿಂಗಾಯತ ಸ್ವತಂತ್ರ ಧರ್ಮ ಸ್ಥಾಪನೆ ಸಂಬಂಧ ಹೋರಾಟ ನಡೆಸುತ್ತಿರುವ ಲಿಂಗಾಯತ ಮುಖಂಡರ ಜತೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಗುರುವಾರ ಬೆಳಗ್ಗೆ ರಹಸ್ಯ ಮಾತುಕತೆ ನಡೆಸಿದರು ಎನ್ನಲಾಗಿದೆ.
ಸಚಿವ ಎಂ.ಬಿ.ಪಾಟೀಲ್ ಅವರಿಗೆ ಸೇರಿದ ಖಾಸಗಿ ಕಚೇರಿಗೆ ಬೆಳಗ್ಗೆ 10.15ಕ್ಕೆ ಖಾಸಗಿ ವಾಹನದಲ್ಲಿ ಬಂದ ಸಿಎಂ ಸಿದ್ದರಾಮಯ್ಯ 11.30ರವರೆಗೆ ಮಾತುಕತೆ ನಡೆಸಿದರು.
ಲಿಂಗಾಯತ ಸ್ವತಂತ್ರ ಧರ್ಮ ಸ್ಥಾಪನೆಗಾಗಿ ನಡೆಯುತ್ತಿರುವ ಹೋರಾಟ, ಕಾನೂನು ಬದ್ಧವಾಗಿ ಎದುರಾಗುವ ಸಮಸ್ಯೆಗಳು, ಲಿಂಗಾಯತ ಸ್ವತಂತ್ರ ಧರ್ಮ ಪುಷ್ಟೀಕರಿಸುವ ಸಂಬಂಧ ಹೋರಾಟ ಸಮಿತಿ ಬಳಿ ಇರುವ ದಾಖಲೆಗಳು ಹಾಗೂ ವೀರಶೈವ ಮಹಾಸಭಾದ ನಿಲವು ಕುರಿತಂತೆ ವಿಸ್ತೃತವಾಗಿ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಉನ್ನತ ಮೂಲಗಳು ಹೇಳಿವೆ.
ಲಿಂಗಾಯತ ಧರ್ಮ ಸ್ಥಾಪನೆ ಸಂಬಂಧ ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿ ಹಾಗೂ ಒಂದು ವೇಳೆ ಮತ್ತೊಮ್ಮೆ ಅರ್ಜಿ ಸಲ್ಲಿಸಿದರೆ ಪೂರಕ ದಾಖಲೆಗಳೊಂದಿಗೆ ಅರ್ಜಿಯನ್ನು ಕರ್ನಾಟಕ ಅಲ್ಪಸಂಖ್ಯಾತರ ಆಯೋಗಕ್ಕೆ ರವಾನಿಸಲಾಗುವುದು,
ವೀರಶೈವ ಮಹಾಸಭಾ ನೀಡಿರುವ ಮನವಿಯನ್ನೂ ಅರ್ಜಿ ರೂಪದಲ್ಲಿ ಆಯೋಗಕ್ಕೆ ಶಿಫಾರಸು ಮಾಡಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ಮೂಲಗಳು
ಹೇಳಿವೆ.
ಸಭೆಯಲ್ಲಿ ಸಚಿವರಾದ ಎಂ.ಬಿ.ಪಾಟೀಲ್, ವಿನಯ್ ಕುಲಕರ್ಣಿ, ಡಾ.ಶರಣಪ್ರಕಾಶ್ ಪಾಟೀಲ್, ಸಂಸದ ಪ್ರಕಾಶ್ ಹುಕ್ಕೇರಿ, ಶಾಸಕರಾದ ಬಸವರಾಜ ಹೊರಟ್ಟಿ, ಅಶೋಕ ಪಟ್ಟಣ ಮತ್ತಿತರರಿದ್ದರು.