ಶುಕ್ರವಾರ ರಾತ್ರಿ ಜೆಡಿಎಸ್ ಬಂಡಾಯ ಶಾಸಕ ಚೆಲುವರಾಯ ಸ್ವಾಮಿ ಅವರ ನಿವಾಸಕ್ಕೆ ತೆರಳಿ ಸಿಎಂ ಭೋಜನ ಕಾಂಗ್ರೆಸ್ ಸೇರ್ಪಡೆ ಕುರಿತು ಚರ್ಚೆ, ಬೆಂಗಳೂರಿನಲ್ಲಿ ಏ. 5ರ ವೇಳೆಗೆ ಬೃಹತ್ ಸಮಾವೇಶ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ರಾತ್ರಿ ಜೆಡಿಎಸ್ ಬಂಡಾಯ ಶಾಸಕ ಚೆಲುವರಾಯ ಸ್ವಾಮಿ ಅವರ ನಿವಾಸಕ್ಕೆ ತೆರಳಿ ಭೋಜನ ಸ್ವೀಕರಿಸಿದರು.
ಕಾಂಗ್ರೆಸ್ ಪಕ್ಷ ಸೇರಲು ಸಜ್ಜಾಗಿರುವ ಜೆಡಿಎಸ್ನ ಬಂಡಾಯ ಶಾಸಕ ಚೆಲುವರಾಯಸ್ವಾಮಿ ಅವರ ಜಯನಗರ ನಿವಾಸಕ್ಕೆ ತೆರಳಿದ ಅವರು ಭೋಜನ ಸ್ವೀಕರಿಸಿದ್ದು, ಈ ವೇಳೆ ಜೆಡಿಎಸ್ನ ಎಲ್ಲಾ ಏಳು ಮಂದಿ ಬಂಡಾಯ ಶಾಸಕರು ಇದ್ದರು.
ಈ ವೇಳೆ ಕಾಂಗ್ರೆಸ್ ಸೇರ್ಪಡೆ ಕುರಿತು ಚರ್ಚೆ ನಡೆಯಿತು ಎನ್ನಲಾಗಿದ್ದು, ಬಹುತೇಕ ಜೆಡಿಎಸ್ ಬಂಡಾಯ ಶಾಸಕರು ರಾಜ್ಯಸಭೆ ಚುನಾವಣೆ ನಂತರ ಪಕ್ಷ ತೊರೆದು ಕಾಂಗ್ರೆಸ್ ಸೇರಲಿದ್ದಾರೆ. ಕಾಂಗ್ರೆಸ್ ಮೂಲಗಳ ಪ್ರಕಾರ ಜನಾಶೀರ್ವಾದ ಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿ ಅವರು ಇಡೀ ರಾಜ್ಯ ಪ್ರವಾಸ ಮುಗಿಸಿದ ನಂತರ ಬೆಂಗಳೂರಿನಲ್ಲಿ ಏ. 5ರ ವೇಳೆಗೆ ಬೃಹತ್ ಸಮಾವೇಶ ನಡೆಸಲಿದ್ದು, ಈ ಸಮಾವೇಶದಲ್ಲಿ ಜೆಡಿಎಸ್ ಬಂಡಾಯ ಶಾಸಕರ ಕಾಂಗ್ರೆಸ್ ಸೇರ್ಪಡೆ ನಡೆಯುವ ಸಂಭವವಿದೆ.
