ನಗರದಲ್ಲಿ 1 ಕೋಟಿ ಜನಸಂಖ್ಯೆಗೆ 55 ಲಕ್ಷ ವಾಹನಗಳಿವೆ. ಸಂಚಾರದಟ್ಟಣೆ ಸಮಸ್ಯೆ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸಲು ಹಲವು ಅಭಿವೃದ್ಧಿ ಮಾರ್ಗೋಪಾಯಗಳು ಬೇಕಾಗಿವೆ
ಬೆಂಗಳೂರು(ಅ.8): ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ಅಭಿವೃದ್ಧಿ ದೃಷ್ಟಿಯಿಂದ ಬಿಬಿಎಂಪಿಗೆ ಮೂವರು ಮೇಯರ್'ಗಳ ಅಗತ್ಯವಿದೆ ಈ ಕಾರಣದಿಂದ ಪಾಲಿಕೆಯನ್ನು ಮೂರು ವಿಭಾಗಗಳಾಗಿ ವಿಂಗಡಿಸುವುದು ನಿಶ್ಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸುಮ್ಮನಹಳ್ಳಿಯ ಲಗ್ಗೆರೆ,ಲಕ್ಷ್ಮೀದೇವಿ ನಗರ ಮತ್ತು ಚೌಡೇಶ್ವರಿ ನಗರದಲ್ಲಿ ಬಿಡಿಎ ವತಿಯಿಂದ ನಿರ್ಮಿಸಲಾಗುತ್ತಿರುವ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿ ಮಾತನಾಡಿದರು. ಬಿಬಿಎಂಪಿ ವಿಭಜನೆ ತಾತ್ಕಾಲಿಕವಾಗಿ ಮುಂದೂಡಲಾಗಿದ್ದರೂ ನಮ್ಮ ಅವಧಿಯಲ್ಲಿಯೇ ವಿಭಜಿಸುವುದು ಖಂಡಿತ. ನಗರವು ವಿಪರೀತ ವೇಗವಾಗಿ ಬೆಳೆಯುತ್ತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಗುರುತಿಸುವ ನಗರ ಇದಾಗಿದೆ. ಇವೆಲ್ಲ ಕಾರಣದಿಂದ ವಿಭಜನೆ ಆಗಬೇಕಾಗಿದೆ. ನಗರದಲ್ಲಿ 1 ಕೋಟಿ ಜನಸಂಖ್ಯೆಗೆ 55 ಲಕ್ಷ ವಾಹನಗಳಿವೆ. ಸಂಚಾರದಟ್ಟಣೆ ಸಮಸ್ಯೆ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸಲು ಹಲವು ಅಭಿವೃದ್ಧಿ ಮಾರ್ಗೋಪಾಯಗಳು ಬೇಕಾಗಿವೆ ಎಂದು ತಿಳಿಸಿದರು.
ಒತ್ತುವರಿ ತೆರವು ಮುಲಾಜಿಲ್ಲದೆ ನಡೆಯುತ್ತಿದೆ
ಬೆಂಗಳೂರಲ್ಲಿ ರಾಜಕಾಲುವೆ ಒತ್ತುವರಿ ತೆರವು ಯಾವುದೇ ಮುಲಾಜಿಲ್ಲದೆ ನಡೆಯುತ್ತಿದೆ. ತೆರವು ವೇಳೆ ಬಡವರು ಮನೆ ಕಳೆದುಕೊಂಡ್ರೆ ಸರ್ಕಾರದಿಂದ ಪರಿಹಾರ ನೀಡಲಾಗುತ್ತದೆ. ಸರ್ಕಾರ ನೂರಾರು ಒತ್ತುವರಿ ತೆರವು ಮಾಡಲು ದಿಟ್ಟ ನಿರ್ಧಾರ ಕೈಗೊಂಡಿದೆ. ಬಡವರಿಗಾಗಿ ವಿಶೇಷ ಯೋಜನೆ ತರಲು ನಮ್ಮ ಸರ್ಕಾರ ಸಿದ್ಧವಾಗಿದ್ದು, 19 ಸಾವಿರ ಕೋಟಿ ರೂ.ಗಳನ್ನು ಹಿಂದುಳಿದ ವರ್ಗದವರ ಅಭಿವೃದ್ಧಿಗೆ ಮೀಸಲಿಟ್ಟಿದ್ದೇವೆ ಎಂದು ಮುಖ್ಯಮಂತ್ರಿಯವರು ತಿಳಿಸಿದ್ದಾರೆ.
