ಸಿಎಂ ಗೆ ಡಿನೋಟಿಫಿಕೇಶನ್ ಉರುಳು: ಸಮನ್ಸ್ ಜಾರಿ!
ಕುಮಾರಸ್ವಾಮಿಗೆ ಕಂಟಕ...?
ಬಜೆಟ್ ಮಂಡನೆ ದಿನವೇ ಕುಮಾರಸ್ವಾಮಿಗೆ ಕಾದಿದೆ ಕಂಟಕ..!
ಕುಮಾರಸ್ವಾಮಿಗೆ ಉರುಳಾಗಲಿದೆಯಾ ಭ್ರಷ್ಟಾಚಾರ ಪ್ರಕರಣ..?
ಬಜೆಟ್ ಮಂಡನೆ ದಿನವೇ ಕೋರ್ಟ್ ಹಾಜರಾಗಬೇಕಿದೆ ಹೆಚ್ಡಿಕೆ..!
ಕುಮಾರಸ್ವಾಮಿಗೂ ಕಾಡಲಿದ್ಯಾ ಭೂ ಕಂಟಕ.?
2006ರ ಕೇಸ್ಗೆ ಈಗ ಸಿಕ್ಕಿದೆ ಮರುಜೀವ..?
ಬೆಂಗಳೂರು(ಜೂ.26): ಮಹತ್ವದ ಬೆಳವಣಿಗೆಯೊಂದರಲ್ಲಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಹೊಸದೊಂದು ಕಂಟಕ ಶುರುವಾಗಿದೆ. ಕುಮಾರಸ್ವಾಮಿ ಈ ಹಿಂದೆ ಸಿಎಂ ಆಗಿದ್ದಾಗ ಮಾಡಿದ್ದ ಡಿನೋಟಿಫಿಕೇಶನ್ ಪ್ರಕರಣವೊಂದು ಇದೀಗ ಅವರಿಗೆ ಉರುಳಾಗುವ ಸಾಧ್ಯತೆ ಇದೆ.
ಬೆಂಗಳೂರಿನ ಥಣಿಸಂದ್ರದ 3 ಎಕರೆ 24 ಗುಂಟೆ ಭೂಮಿ ಡಿನೋಟಿಫಿಕೇಶನ್ ಪ್ರಕರಣ ಇದೀಗ ಹೆಡೆ ಎತ್ತಿದೆ. ಹಿಂದೆ ಸಿಎಂ ಆಗಿದ್ದಾಗ ಕುಮಾರಸ್ವಾಮಿ ಶ್ರೀರಾಮ್ ಹಾಗೂ ರವಿಪ್ರಕಾಶ್ ಎಂಬುವವರಿಗೆ ಡಿನೋಟಿಫಿಕೇಶನ್ ಮಾಡಿಕೊಟ್ಟಿದ್ದರು. ಬಿಡಿಎ ಭೂಮಿ ಸ್ವಾಧೀನಕ್ಕೆ ಪಡೆದು ಪರಿಹಾರ ನೀಡಿದ್ದಲ್ಲದೇ ನಿವೇಶನವನ್ನೂ ಹಂಚಿತ್ತು. ಆದರೂ ಆಗಿನ ಅರಣ್ಯ ಸಚಿವ ಚೆನ್ನಿಗಪ್ಪ ಮನವಿ ಮೇರೆಗೆ ಕುಮಾರಸ್ವಾಮಿ ಡಿನೋಟಿಫಿಕೇಶನ್ ಮಾಡಿದ್ದರು
ಆದರೆ ಡಿನೋಟಿಫೈ ಮಾಡಿದ್ದ ಜಮೀನು ಮಾರಾಟದಿಂದ ಪಾಲು ಪಡೆದ ಆರೋಪ ಸಿಎಂ ಮತ್ತು ಚನ್ನಿಗಪ್ಪ ಮೇಲೆ ಇದೀಗ ಕೇಳಿ ಬಂದಿದೆ. ಈ ಕುರಿತು 2012ರಲ್ಲಿ ಚಾಮರಾಜನಗರದ ಮಹದೇವಸ್ವಾಮಿ ಎಂಬುವವರು ಲೋಕಾಯುಕ್ತ ಕೋರ್ಟ್ನಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದಲ್ಲಿ ಎಚ್.ಡಿ. ಕುಮಾರಸ್ವಾಮಿ ನಿರೀಕ್ಷಣಾ ಜಾಮೀನು ಪಡೆದು ಪ್ರಕರಣ ರದ್ದತಿಗೆ ಹೈಕೋರ್ಟ್ಗೆ ಹೋಗಿದ್ದರು.
ಆದರೆ ಹೈಕೋರ್ಟ್ ಪ್ರಕರಣ ರದ್ದು ಮಾಡಲು ನಿರಾಕರಿಸಿ, ತನಿಖೆಗೆ ಆದೇಶಿಸಿತ್ತು. ಪ್ರಕರಣವನ್ನು ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿದ್ದರು. ಆರೋಪ ಪಟ್ಟಿ ಸಲ್ಲಿಕೆ ನಂತರ ಕೋರ್ಟ್ ಹಲವು ಬಾರಿ ಸಿಎಂಗೆ ನೋಟಿಸ್ ಕೂಡ ಜಾರಿ ಮಾಡಿತ್ತು. ಆದರೆ ನೋಟಿಸ್ ಅನ್ವಯ ಎಚ್.ಡಿ. ಕುಮಾರಸ್ವಾಮಿ ಅವರು ನ್ಯಾಯಾಲಯಕ್ಕೆ ಇದುವರೆಗೂ ಹಾಜರಾಗಿಲ್ಲ.
ಈ ಕಾರಣದಿಂದ ಚಾರ್ಜ್ ಶೀಟ್ ಸಂಬಂಧ ಆರೋಪ ಹೊರಿಸುವ ಮುನ್ನ ಕೋರ್ಟ್ ಹಾಜರಾಗುವಂತೆ ಕುಮಾರಸ್ವಾಮಿ ಅವರಿಗೆ ಸಮನ್ಸ್ ಜಾರಿಗೊಳಿಸಲಾಗಿದೆ. ಜುಲೈ 5ರಂದು ಕೋರ್ಟ್ಗೆ ಹಾಜರಾಗುವಂತೆ ಜೂನ್ 23ರಂದು ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.