ಸಮಾಜ ಕಲ್ಯಾಣ ಇಲಾಖೆಗೆ ಸಿಎಂ ಕೊಟ್ಟಿದ್ದಿಷ್ಟು
ಸಿಎಂ ಕುಮಾರಸ್ವಾಮಿ ಬಜೆಟ್ ಮಂಡನೆ
ಪೂರ್ಣ ಪ್ರಮಾಣದ ಬಜೆಟ್ ಮಂಡಿಸುತ್ತಿರುವ ಸಿಎಂ
ಇಲಾಖಾವಾರು ಅನುಮೋದನೆಗೆ ಸಿಎಂ ಅಸ್ತು
ಸಮಾಜ ಕಲ್ಯಾಣ ಇಲಾಖೆಗೆ ಸಿಎಂ ಕೊಡುಗೆ ಏನು?
ಬೆಂಗಳೂರು(ಜು.5): ವಿಧಾನಸಭೆಯಲ್ಲಿ ಕುಮಾರಸ್ವಾಮಿ ಭಾಷಣ ಮುಂದುವರೆದಿದ್ದು, ಇಲಾಖಾವಾರು ಅನುಮೋದನೆಗಳನ್ನು ಸಿಎಂ ಒಂದೊಂದಾಗಿ ಮಂಡಿಸುತ್ತಿದ್ದಾರೆ. ಈಗಾಗಲೇ ಸಮಾಜ ಕಲ್ಯಾಣ ಇಲಾಖೆಯ ಅನುಮೋದನೆ ಪ್ರಸ್ತಾವನೆ ಮಾಡಲಾಗಿದ್ದು, ಸಮಾಜ ಕಲ್ಯಾಣ ಇಲಾಖೆಗೆ ಸಿಎಂ ಕುಮಾರಸ್ವಾಮಿ ಹಲವು ಭರಪೂರ ಕೊಡುಗೆ ಘೋಷಿಸಿದ್ದಾರೆ.
ಪ್ರಮುಖವಾಗಿ ಗಂಗಾ ಕಲ್ಯಾಣ ಯೋಜನೆಯಡಿ 2.50 ಲಕ್ಷದಿಂದ 4 ಲಕ್ಷ ರೂ. ಗೆ ಹೆಚ್ಚಳ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ 5 ಸಾವಿರ ನಿರುದ್ಯೋಗಿ ಯುವಕ ಯುವತಿಯರಿಗೆ 10 ಲಕ್ಷ ರೂ ಆರ್ಥಿಕ ನೆರವು, ವಿವಿಧ ಜಿಲ್ಲೆಗಳಲ್ಲಿ ಕೈಗಾರಿಕಾ ಹಾಗು ತಾಂತ್ರಿಕ ಸಂಸ್ಥೆಗಳ ಸಹಯೋಗದಿಂದ 5 ಸಾವಿರ ನೀರುದ್ಯೋಗಿಗಳಿಗೆ 15 ಕೋಟಿ ರೂ ವೆಚ್ಚದ ತರಬೇತಿಯನ್ನು ಸಿಎಂ ಘೋಷಿಸಿದ್ದಾರೆ.
ಅಲ್ಲದೇ ಹೈ. ಕ. ವ್ಯಾಪ್ತಿಯ ಕಲ್ಬುರ್ಗಿಯಲ್ಲಿ ಎಸ್ಸಿ, ಎಸ್ಟಿ ಪಧವಿದರರಿಗೆ ಯುಪಿಎಸ್ಸಿ - ಕೆಪಿಎಸ್ಸಿ ತರಬೇತಿ, ಪ್ರಗತಿ ಕಾಲೋನಿ ಯೋಜನೆಯಡಿ ಎಸ್ಸಿ, ಎಸ್ಟಿ ಮತ್ತು ತಾಂಡಾಗಳ ಅಭಿವೃದ್ಧಿಗೆ 1ರಿಂದ 5 ಕೋಟಿ ರೂ ಅನುದಾನವನ್ನು ಸಿಎಂ ನೀಡಿದ್ದಾರೆ.
ಇನ್ನು ಎಸ್ಸಿ, ಎಸ್ಟಿ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಎರಡು ಕೋಟಿ ವೆಚ್ಚದಲ್ಲಿ ತರಬೇತಿ, ಆಯ್ದ ಜಿಲ್ಲೆಗಳಲ್ಲಿ ಎಸ್ಸಿ, ಎಸ್ಟಿ ಮಾದರಿ ನವಗ್ರಾಮಗಳ ನಿರ್ಮಾಣ, ಎಸ್ಸಿ, ಎಸ್ಟಿ ಯುವಕರು ಮತ್ತು ನಿರುದ್ಯೋಗಿಗಳಿಗೆ ನೆರವಾಗಲು ಸ್ವಯಂ ಉದ್ಯೋಗ ತರಬೇತಿ ಕೇಂದ್ರಗಳ ಸ್ಥಾಪನೆಗೆ ಕುಮಾರಸ್ವಾಮಿ ಒಪ್ಪಿಗೆ ನೀಡಿದ್ದಾರೆ.
ಭೂ ಒಡೆತನ ಯೋಜನೆಯಡಿ ಜಮೀನು ಪಡೆದ ರೈತ ಮಹಿಳೆಯರಿಗೆ ಕೊಳವೆ ಬಾವಿ ಮತ್ತು ಕೃಷಿ ಯಂತ್ರೋಪಕರಣ ವಿತರಣೆಗೆ ಗ್ರೀನ್ ಸಿಗ್ನಲ್ ಕೊಡಲಾಗಿದೆ. ಎಲ್ಲಾ ರೀತಿಯಲ್ಲೂ ಹಿಂದುಳಿದ ಶಿಳ್ಳೆಕ್ಯಾತ, ದೊಂಬಿದಾಸ , ಗೌಳಿ, ಹೆಳವ, ಶಿಕಾರಿಗಳು, ಹೂವಾಡಿಗ, ಕಾಂಚುಗಾರ, ಕಮ್ಮಾರ, ದರ್ಜಿ, ದೇವಾಡಿಗ, ಬುಡುಬುಡಿಕೆ, ಮುಂತಾದ ಸಮಾಜಗಳ ಅಭಿವೃದ್ಧಿಗೆ 10 ಕೋಟಿ ಅನುದಾನವನ್ನು ಮೀಸಲಿರಿಸುವುದಾಗಿ ಸಿಎಂ ಕುಮಾರಸ್ವಾಮಿ ಘೋಷಿಸಿದ್ದಾರೆ.