ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಇದೀಗ ಸಿಎಂ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.  ಜಿಂದಾಲ್ ನಿಂದ ಯಡಿಯೂರಪ್ಪ 20 ಕಿಕ್ ಬ್ಯಾಕ್ ಮೂಲಕ ಪಡೆದಿದ್ದರು ಎಂದು ಹೇಳಿದ್ದಾರೆ. 

ಚನ್ನಪಟ್ಟಣ : ಜಿಂದಾಲ್‌ಗೆ ಬಳ್ಳಾರಿಯಲ್ಲಿ ಭೂಮಿ ಪರಭಾರೆ ವಿರುದ್ಧ ಹೋರಾಟ ನಡೆಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದು, ಜಿಂದಾಲ್‌ನಿಂದ 20 ಕೋಟಿ ರು. ಕಿಕ್‌ಬ್ಯಾಕ್‌ ಅನ್ನು ಚೆಕ್‌ ಮೂಲಕ ಯಡಿಯೂರಪ್ಪ ಪಡೆದಿದ್ದನ್ನು ನಾನೇ ಬಹಿರಂಗ ಪಡಿಸಿದ್ದೆ. ಇದನ್ನು ಮರೆತಿರುವ ಅವರು ನನ್ನ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

Add Asianetnews Kannada as a Preferred SourcegooglePreferred

ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ಸೋಮವಾರ ನಡೆಸಿದ ಜನತಾದರ್ಶನದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಂದಾಲ್‌ಗೆ ಜಮೀನಿನ ಲೀಸ್‌ ಕಂ ಸೇಲ್‌ ಪತ್ರಕ್ಕೆ ಸಹಿ ಹಾಕಿದವರು ಯಾರು ಎಂಬುದನ್ನು ಮೊದಲು ಅರಿತು, ಆನಂತರ ನನ್ನ ವಿರುದ್ಧ ಪ್ರತಿಭಟನೆ ನಡೆಸಬೇಕು ಎಂದು ಯಡಿಯೂರಪ್ಪಗೆ ಟಾಂಗ್‌ ನೀಡಿದರು.

ಬಿಜೆಪಿ ನಾಯಕರು ಜನರ ದಿಕ್ಕು ತಪ್ಪಿಸಲು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ನೇರವಾಗಿ ನನ್ನ ಬಳಿಗೆ ಬಂದು ರಾಜ್ಯದ ಸಮಸ್ಯೆಗಳು ಮತ್ತು ಅಭಿವೃದ್ಧಿ ವಿಚಾರದಲ್ಲಿ ಚರ್ಚೆ ನಡೆಸುವುದನ್ನು ಬಿಟ್ಟು ಪ್ರತಿಭಟನೆಯ ಹೆಸರಿನಲ್ಲಿ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಐಎಂಎ, ಬರ ನಿರ್ವಹಣೆ, ಜಿಂದಾಲ್‌ ಹೀಗೆ ಯಾವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷದ ನಾಯಕರು ಸೇರಿದಂತೆ ಯಾರು ಬೇಕಾದರೂ ಬಂದು ನನ್ನೊಂದಿಗೆ ಚರ್ಚಿಸಲಿ ಎಂದು ಪಂಥಾಹ್ವಾನ ನೀಡಿದರು.