ಕಸ ವಿಲೇವಾರಿ ಹಣದ ಮೇಲೂ ಸಿಎಂ ಕಣ್ಣು
ರಾಜ್ಯದಲ್ಲಿ ರೈತರ ಸಾಲ ಮನ್ನಾ ಮಾಡಿರುವ ಸಿಎಂ ಕುಮಾರಸ್ವಾಮಿ ಇದನ್ನು ಸರಿದೂಗಿಸುವ ಸಲುವಾಗಿ ವಿವಿಧ ರೀತಿಯ ಅನುದಾನಗಳನ್ನು ಹೊಂದಾಣಿಕೆ ಮಾಡುತ್ತಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕಣ್ಣು ಇದೀಗ ಬಿಬಿಎಂಪಿ ಅನುದಾನದ ಮೇಲೂ ಬಿದ್ದಿದೆಯಾ ಎನ್ನುವ ಅನುಮಾನಗಳು ವ್ಯಕ್ತವಾಗುತ್ತಿವೆ.
ಬೆಂಗಳೂರು : ಬಿಬಿಎಂಪಿ ಅನುದಾನದ ಮೇಲೆ ಸಿಎಂ ಕುಮಾರಸ್ವಾಮಿ ಕಣ್ಣಿಟ್ಟಿದ್ದಾರಾ ಎನ್ನುವ ಪ್ರಶ್ನೆ ಇದೀಗ ಮೂಡಿದೆ. ಘನತ್ಯಾಜ್ಯ ವಿಲೇವಾರಿಗೆ ಮೀಸಲಿಟ್ಟಿದ್ದ ಹಣ ಬೇರೆ ಕಾಮಗಾರಿಗಳಿಗೆ ಬಳಕೆ ಮಾಡಲು ತೀರ್ಮಾನ ಮಾಡಿದ್ದಾರಾ ಎನ್ನುವ ಅನುಮಾನ ಕಾಡಿದೆ. ಕಸ ನಿರ್ವಹಣೆಗೆ ಮೀಸಲಿಟ್ಟಿದ್ದ 115 ಕೋಟಿ ಹಣವನ್ನು ಬೇರೆ ಕಾಮಗಾರಿ ಬಳಕೆ ಮಾಡಲು ತೀರ್ಮಾನಿಸಿದ್ದು, ಜಾಬ್ ಕೋಡ್ ನೀಡಿದ್ದ ಬಿಬಿಎಂಪಿಗೆ ಸಿಎಂ ಕುಮಾರಸ್ವಾಮಿ ಚಾಟಿ ಬೀಸಿದ್ದಾರೆ.
ಪಾರ್ಕ್, ಮುಖ್ಯರಸ್ತೆಗಳ ನಿರ್ವಹಣೆಗೆ ಬಿಬಿಎಂಪಿ ಜಾಬ್ ಕೋಡ್ ನೀಡಿತ್ತು. ಆದರೆ ಇದೀಗ ಮೇಯರ್ ಹಾಗೂ ಕಮಿಷನರ್ ಒಪ್ಪಿಗೆ ಪಡೆದಿದ್ದ ಕಾಮಗಾರಿಗಳು ರಿಜೆಕ್ಟ್ ಆಗಿದೆ. ನಗರಾಭಿವೃದ್ದಿ ಇಲಾಖೆಯ ಒಪ್ಪಿಗೆಗೆ ಕಳುಹಿಸಿದ್ದ ಬಿಬಿಎಂಪಿಯ 115 ಕೋಟಿ ಕಾರ್ಯಾದೇಶಗಳನ್ನು ಸಿಎಂ ರಿಜೆಕ್ಟ್ ಮಾಡಿದ್ದಾರೆ.
ಜಾಬ್ಕೋಡ್ ರದ್ದುಪಡಿಸುವುದಾಗಿ ಬಿಬಿಎಂಪಿಗೆ ನಗರಾಭಿವೃದ್ಧಿ ಇಲಾಖೆ ಆದೇಶ ನೀಡಿದೆ. ಈ ಹಿಂದೆ ಜಾಬ್ಕೋಡ್ ಅವ್ಯವಹಾರದ ಬಗ್ಗೆ ಜೆಡಿಎಸ್ ಸದಸ್ಯರು ಸಿಎಂ ಗಮನಕ್ಕೆ ತಂದಿದ್ದು, 115 ಕೋಟಿ ಹಣಕ್ಕೆ ಈಗಾಗಲೇ ಮೇಯರ್ ಸಂಪತ್ ರಾಜ್ ಕೂಡ ಕಮಿಷನ್ ಪಡೆದಿದ್ದರು ಎನ್ನುವ ಬಗ್ಗೆಯೂ ಮಾಹಿತಿ ನೀಡಲಾಗಿತ್ತು.