ಅರುಣಾಚಲ ಪ್ರದೇಶದಲ್ಲಿ ಚೀನಾ ಗಣಿಗಾರಿಕೆ
ಅರುಣಾಚಲಪ್ರದೇಶದ ಗಡಿಯಲ್ಲಿ, ತನಗೆ ಸೇರಿದ ಜಾಗದಲ್ಲಿ ಭಾರತ ಒಂದು ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸಿದರೂ ಕ್ಯಾತೆ ತೆಗೆಯುವ ಚೀನಾ, ಇದೀಗ ಅದೇ ಅರುಣಾಚಲಪ್ರದೇಶ ಗಡಿಯಲ್ಲಿರುವ ಟಿಬೆಟ್ನ ಪ್ರಾಂತ್ಯವೊಂದರಲ್ಲಿ ಬೃಹತ್ ಪ್ರಮಾಣದ ಗಣಿಗಾರಿಕೆ ಆರಂಭಿಸಿದೆ. ಇದು ಇನ್ನೇನು ಡೋಕ್ಲಾಂ ವಿವಾದದ ಬಳಿಕ ಉಂಟಾಗಿದ್ದ ಬಿಕ್ಕಟ್ಟು ತಣ್ಣಗಾಯಿತು ಎನ್ನುವಷ್ಟರಲ್ಲೇ ಉಭಯ ದೇಶಗಳ ನಡುವೆ ಹೊಸದೊಂದು ಸಂಘರ್ಷಕ್ಕೆ ಕಾರಣವಾಗಬಹುದು ಎಂದು ವಿಶ್ಲೇಷಿಸಲಾಗಿದೆ.
ಬೀಜಿಂಗ್ (ಮೇ. 21): ಅರುಣಾಚಲಪ್ರದೇಶದ ಗಡಿಯಲ್ಲಿ, ತನಗೆ ಸೇರಿದ ಜಾಗದಲ್ಲಿ ಭಾರತ ಒಂದು ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸಿದರೂ ಕ್ಯಾತೆ ತೆಗೆಯುವ ಚೀನಾ, ಇದೀಗ ಅದೇ ಅರುಣಾಚಲಪ್ರದೇಶ ಗಡಿಯಲ್ಲಿರುವ ಟಿಬೆಟ್ನ ಪ್ರಾಂತ್ಯವೊಂದರಲ್ಲಿ ಬೃಹತ್ ಪ್ರಮಾಣದ ಗಣಿಗಾರಿಕೆ ಆರಂಭಿಸಿದೆ. ಇದು ಇನ್ನೇನು ಡೋಕ್ಲಾಂ ವಿವಾದದ ಬಳಿಕ ಉಂಟಾಗಿದ್ದ ಬಿಕ್ಕಟ್ಟು ತಣ್ಣಗಾಯಿತು ಎನ್ನುವಷ್ಟರಲ್ಲೇ ಉಭಯ ದೇಶಗಳ ನಡುವೆ ಹೊಸದೊಂದು ಸಂಘರ್ಷಕ್ಕೆ ಕಾರಣವಾಗಬಹುದು ಎಂದು ವಿಶ್ಲೇಷಿಸಲಾಗಿದೆ.
ಟಿಬೆಟ್ಗೆ ಸೇರಿರುವ ಲ್ಹೂಂಜೆ ಎಂಬ ಪ್ರದೇಶದಲ್ಲಿ 4 ಲಕ್ಷ ಕೋಟಿ ರು. ಮೌಲ್ಯದಷ್ಟು ಚಿನ್ನ, ಬೆಳ್ಳಿ ಹಾಗೂ ಖನಿಜ ಅದಿರುಗಳಿದ್ದು, ಅದನ್ನು ಹೊರತೆಗೆಯಲು ಚೀನಾ ಪ್ರಾರಂಭಿಸಿದೆ. ಗಡಿಯಲ್ಲಿ ತನ್ನ ನಿಯಂತ್ರಣವನ್ನು ಮತ್ತಷ್ಟು ಬಲಗೊಳಿಸುವ ಉದ್ದೇಶದಿಂದ ಮತ್ತು ಅರುಣಾಚಲ ಪ್ರದೇಶದ ಮೇಲಿನ ತನ್ನ ಹಕ್ಕನ್ನು ಇನ್ನಷ್ಟು ಪ್ರತಿಪಾದಿಸುವ ನಿಟ್ಟಿನಲ್ಲಿ ಚೀನಾ ಈ ಯೋಜನೆ ಕೈಗೆತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ.
ಅರುಣಾಚಲಪ್ರದೇಶದ ಗಡಿಗೆ ಲ್ಹೂಂಜೆ ಸಮೀಪದಲ್ಲೇ ಇದ್ದರೂ, ಅದು ಚೀನಾದ ಭೂಭಾಗದಲ್ಲಿದೆ. ಕಳೆದ ವರ್ಷ ಚೀನಾ, ಭಾರತ ಹಾಗೂ ಭೂತಾನ್ನ ಗಡಿ ತ್ರಿವಳಿ ಸಂಗಮ ಸ್ಥಳಕ್ಕೆ ಸಮೀಪದ ಡೋಕ್ಲಾಮ್ನಲ್ಲಿ ಚೀನಿಯರು ರಸ್ತೆ ನಿರ್ಮಾಣ ಆರಂಭಿಸುತ್ತಿದ್ದಾಗ ಭಾರತ ಆಕ್ಷೇಪ ಎತ್ತಿತ್ತು. ಇದು ಕೆಲವು ತಿಂಗಳುಗಳ ಕಾಲ ಎರಡೂ ದೇಶಗಳ ವೈಮನಸ್ಯಕ್ಕೆ ಕಾರಣವಾಗಿತ್ತು. ಈ ಬಿಕ್ಕಟ್ಟನ್ನು ಪರಿಹಾರ ಮಾಡಲೆಂದೇ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾಕ್ಕೆ ಭೇಟಿ ನೀಡಿ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಜೊತೆ ಅನಪೌಚಾರಿಕ ಸಭೆ ನಡೆಸಿದ್ದರು. ಈ ವೇಳೆ ಗಡಿಯಲ್ಲಿ ಸಾಮರಸ್ಯ ಕಾಪಾಡಿಕೊಳ್ಳಲು ಉಭಯ ನಾಯಕರು ಸಮ್ಮತಿಸಿದ್ದರು. ಅದರ ಬೆನ್ನಲ್ಲೇ ನಡೆದಿರುವ ಬೆಳವಣಿಗೆ, ಭಾರತದೊಂದಿಗಿನ ಗಡಿ ವಿವಾದ ಇತ್ಯರ್ಥದಲ್ಲಿ ಚೀನಾದ ನಿಲುವನ್ನು ಮತ್ತೊಮ್ಮೆ ಪ್ರಶ್ನಿಸುವಂತೆ ಮಾಡಿದೆ.