ಕಾರವಾರದಲ್ಲಿ ಅಂಗನವಾಡಿ ಕಟ್ಟಡ ಕುಸಿತ; 17 ಮಕ್ಕಳು ಅದೃಷ್ಟ ರೀತಿಯಲ್ಲಿ ಪಾರು..!
ಅಂಗನವಾಡಿಯಲ್ಲಿ ಮಕ್ಕಳು ಪಾಠ ಕಲಿಯುತ್ತಿದ್ದಾಗಲೇ ಕಟ್ಟಡ ಗೋಡೆ ಹಾಗೂ ಮೇಲ್ಛಾವಣಿ ಕುಸಿದು ಬಿದ್ದ ಘಟನೆಯೊಂದು ನಡೆದಿದೆ. ಈ ಘಟನೆಯಲ್ಲಿ ಮಕ್ಕಳಿಗೆ ಅನಾಹುತ ಸಂಭವಿಸದೇ ಅದೃಷ್ಠವಶಾತ್ ರೀತಿಯಲ್ಲಿ ಎಲ್ಲ ಪುಟಾಣಿಗಳು ಪಾರಾಗಿದ್ದಾರೆ. ಹಾಗಿದ್ರೇ ಈ ದುರಂತ ನಡೆದಿದಾದ್ರೂ ಎಲ್ಲಿ ಅಂಥ ಈ ಸ್ಟೋರಿಯಲ್ಲಿ ನೋಡಿ.
ಕಾರವಾರ: ನೆಲಕಚ್ಚಿದ ಅಂಗನವಾಡಿ ಕಟ್ಟಡ.. ಹೊರಗೋಡಿ ಬಂದು ಪ್ರಾಣ ರಕ್ಷಿಸಿಕೊಂಡ ಪುಟ್ಟ ಮಕ್ಕಳು.. ಇದು ಕಾರವಾರದ ಕಳಸವಾಡದ ಶಾಲಾವಾಡದ ಅಂಗನವಾಡಿಯಲ್ಲಿ ನಡೆದ ದುರಂತ. ಇಲ್ಲಿ ಮಕ್ಕಳು ಓದುತ್ತಿರುವಾಗಲೇ ಅಂಗನವಾಡಿ ಕಟ್ಟಡ ಕುಸಿದಿದೆ. ಅದೃಷ್ಟವಶಾತ್ ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ 17 ಮಕ್ಕಳಿಗೇನೂ ಅಪಾಯವಾಗಿಲ್ಲ.
ಕಳಸವಾಡಾದ ಶಿಕ್ಷಣ ಇಲಾಖೆಯ ಹಳೆಯ ಕಟ್ಟಡದಲ್ಲೇ ಈ ಅಂಗನವಾಡಿ ಕೇಂದ್ರ ನಡೆಯುತ್ತಿತ್ತು. ಕಟ್ಟಡ ಶಿಥಿಲಗೊಂಡಿದ್ದರೂ ಅಧಿಖಾರಿಗಳು ತಲೆ ಕೆಡಿಸಿಕೊಂಡಿರಲಿಲ್ಲ. ಈಗ ಮಳೆಗಾಲವಾದ್ದರಿಂದ ಕಟ್ಟಡ ನೆಲಕಚ್ಚಿದೆ. ಪಾಪ ಮುಗ್ದ ಮಕ್ಕಳು ಬೆಚ್ಚಿಬಿದ್ದಿದ್ದಾರೆ.
ಕಟ್ಟಡ ಕುಸಿದು ಬಿದ್ದ ಸುದ್ದಿ ತಿಳಿಯುತ್ತಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಕಟ್ಟಡ ಬಿದ್ದಮೇಲೆ ಬಂದು ಪರಿಶೀಲನೆ ನಡೆಸಿ ಏನು ಪ್ರಯೋಜನ? ಕಟ್ಟಡ ಶಿಥಿಲಾವಸ್ಥೆಯಲ್ಲಿದೆ ಎಂಬುದು ಗೊತ್ತಿದ್ದರೂ ಅಧಿಕಾರಿಗಳು ಬೇರೆ ವ್ಯವಸ್ಥೆ ಮಾಡದೇ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡ್ತಿದ್ದಾರೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಶಾಲಾ ಕಟ್ಟಡ ದುರಂತದಿಂದ ಮಕ್ಕಳು ಜೀವ ಕಳೆದುಕೊಂಡಿರುವ ಪ್ರಕರಣಗಳು ಇನ್ನು ಹಸಿಯಾಗಿವೆ. ಹೀಗಿದ್ದೂ ಅಧಿಕಾರಿಗಳು ಇಷ್ಟೊಂದು ನಿರ್ಲಕ್ಷ್ಯ ವಹಿಸಿದ್ದು ಸರಿಯೇ..? ಅಧಿಕಾರಿಗಳೇ ಈ ಮಕ್ಕಳು ನಿಮ್ಮ ಮಕ್ಕಳಂತೆ ಅನ್ನೋ ಭಾವನೆ ನಿಮಗಿರಲಿ.. ಈಗಲಾದ್ರೂ ಎಚ್ಚೆತ್ತುಕೊಳ್ಳಿ.
- ಕಡತೋಕಾ ಮಂಜು, ಸುವರ್ಣ ನ್ಯೂಸ್, ಕಾರವಾರ