ಹೊನ್ನಾಳಿಯಲ್ಲಿ ಚಿಕೂನ್ ಗುನ್ಯಾ, ಡೆಂಘ್ಯು ಜ್ವರ ಪತ್ತೆ
ತಾಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ಚಿಕೂನ್ ಗುನ್ಯಾ ಹಾಗೂ ಡೆಂಘೀ ಜ್ವರದಿಂದ ಜನ ನರಳುತ್ತಿದ್ದು, ಈ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಉಮಾ ರಮೇಶ್ ಹಾಗೂ ಸಿಇಒ ಎಸ್. ಅಶ್ವಿತಿ, ಜಿಲ್ಲಾ ಆರೋಗ್ಯಾಧಿಕಾರಿಗಳ ತಂಡ ಹಾಗೂ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹೊನ್ನಾಳಿ (ನ.29): ತಾಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ಚಿಕೂನ್ ಗುನ್ಯಾ ಹಾಗೂ ಡೆಂಘೀ ಜ್ವರದಿಂದ ಜನ ನರಳುತ್ತಿದ್ದು, ಈ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಉಮಾ ರಮೇಶ್ ಹಾಗೂ ಸಿಇಒ ಎಸ್. ಅಶ್ವಿತಿ, ಜಿಲ್ಲಾ ಆರೋಗ್ಯಾಧಿಕಾರಿಗಳ ತಂಡ ಹಾಗೂ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಿಇಒ ಎಸ್. ಅಶ್ವತಿ ಮಾತನಾಡಿ, ಗ್ರಾಮದಲ್ಲಿ ಚಿಕೂನ್ ಗುನ್ಯಾ ಹಾಗೂ ಡೆಂಘೀರೋಗ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ವೈದ್ಯರು ಗ್ರಾಮದಲ್ಲಿಯೇ ತಪಾಸಣಾ ಕೇಂದ್ರವನ್ನು ತೆರೆದು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಹೇಳಿದರು.
ಸುಮಾರು 57 ಜನರಲ್ಲಿ ಚಿಕೂನ್ ಗುನ್ಯಾ ರೋಗ ಲಕ್ಷಣ ಕಂಡುಬಂದಿದೆ. ಈ ಪೈಕಿ 4 ಜನರಲ್ಲಿ ತೀವ್ರತರಹದ ರೋಗಲಕ್ಷಣಗಳು ಕಂಡುಬಂದಿವೆ. ಒಬ್ಬರಲ್ಲಿ ಡೆಂಘೀ ರೋಗ ಲಕ್ಷಣ ಕಂಡುಬಂದಿದೆ ಎಂದು ಹೇಳಿದರು.
ಈಗಾಗಲೇ ಗ್ರಾಮದಲ್ಲಿ ಆರೋಗ್ಯ ಇಲಾಖೆ ವತಿಯಿಂದ ತಪಾಸಣಾ ಕೇಂದ್ರ ತೆರೆದು ವೈದ್ಯರ ತಂಡ ಇಲ್ಲಿಯೇ ಬೀಡುಬಿಟ್ಟಿದ್ದು, ಜನರಿಗೆ ರೋಗಗಳ ಬಗ್ಗೆ ಸೂಕ್ತ ಮಾರ್ಗದರ್ಶನ ಹಾಗೂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಗ್ರಾಮಸ್ಥರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಉಮಾ ರಮೇಶ್ ಮಾತನಾಡಿ, ರೋಗಗಳ ತಡೆ ಹಾಗೂ ಇತರೆ ಕಡೆಗೆ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೂಡಲೇ ತಗೆದುಕೊಳ್ಳುವಂತೆ ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ. ಜನರೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ತ್ರಿಪುಲಾಂಭ ಮಾತನಾಡಿ, ಸಾಮಾನ್ಯವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ನೀರನ್ನು ಬಹುದಿನಗಳವರೆಗೆ ಸಂಗ್ರಹಿಸುವುದರಿಂದ ಅದರಲ್ಲಿ ಲಾರ್ವಗಳು ಉತ್ಪತ್ತಿಯಾಗಿ ಇಂತಹ ರೋಗಗಳ ಹರಡುವಿಕೆಗೆ ಕಾರಣವಾಗಿದೆ. ನೀರನ್ನು ಹೆಚ್ಚು ದಿನಗಳವರೆಗೆ ಸಂಗ್ರಹಿಸದಂತೆ ಹಾಗೂ ಸ್ವಚ್ಛತೆ ಕಾಪಾಡುವಂತೆ ಗ್ರಾಮಸ್ಥರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.
ಅಧಿಕಾರಿಗಳ ನಿರ್ಲಕ್ಷ ಆರೋಪ:
ಇಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯತನದಿಂದಾಗಿ ಶುದ್ಧ ಕುಡಿಯುವ ನೀರಿನ ಘಟಗಳು ಅಶುದ್ಧ ಕುಡಿಯುವ ನೀರಿನ ಘಟಕಗಳಾಗಿವೆ ಇಲ್ಲಿನ ಜನ ಆರೋಪಿಸಿದರು. ಶುದ್ಧ ಕುಡಿಯುವ ನೀರಿನ ಘಟಕವನ್ನು ಪರಿಶೀಲನೆ ಮಾಡಿದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಉತ್ತಮ ಗುಣಮಟ್ಟದ ಶುದ್ಧ ಕುಡಿಯುವ ನೀರು ಘಟಕ ಸ್ಥಾಪನೆ ಹಾಗೂ ಕುಠಿತಗೊಂಡಿರುವ ತಾಲೂಕು ಅಡಳಿತ ಕೂಡಲೇ ಚುರುಕಾಗದಿದ್ದರೆ ಬಿಜೆಪಿ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.