ನಕ್ಸಲ್ ದಾಳಿಗೆ ರಾಜ್ಯದ ಇಬ್ಬರು ಯೋಧರು ಹುತಾತ್ಮ
- ಸಂತೋಷ್ ಲಕ್ಷ್ಮಣ್ನಾಯಕ್ ಮತ್ತು ವಿಜಯ್ ನಂದ್ ನಾಯಕ್ ಹುತಾತ್ಮರಾದ ಯೋಧರು
- ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ನಕ್ಸಲರಿಂದ ಸ್ಫೋಟ
ರಾಯಪುರ[ಜು.10]: ಛತ್ತೀಸ್ಗಢದ ಕಂಕೇರ್ ಜಿಲ್ಲೆ ಯಲ್ಲಿ ಸೋಮವಾರ ನಕ್ಸಲರು ನಡೆಸಿದ ಸ್ಫೋಟದಲ್ಲಿ ಬಿಎಸ್ಎಫ್ಗೆ ಸೇರಿದ ಕರ್ನಾಟಕದ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.
ಸಂತೋಷ್ ಲಕ್ಷ್ಮಣ್ನಾಯಕ್ ಮತ್ತು ವಿಜಯ್ ನಂದ್ ನಾಯಕ್ ಹುತಾತ್ಮರಾದ ಯೋಧರು. ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ನಕ್ಸಲರು ನಡೆಸಿದ ಸ್ಫೋಟದಿಂದ ಸಾವು ಸಂಭವಿಸಿದೆ.
ಹುತಾತ್ಮ ಯೋಧರನ್ನು ಸಂತೋಷ್ ಲಕ್ಷ್ಮಣ್ನಾಯಕ್ ಮತ್ತು ವಿಜಯ್ ನಂದ್ ನಾಯಕ್ ಎಂದು ಗುರುತಿಸಲಾಗಿದೆ. ನಕ್ಸಲ್ ಪೀಡಿತ ಪ್ರದೇಶದಲ್ಲಿ ಯೋಧರು ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ನಕ್ಸಲರು ಸ್ಫೋಟ ನಡೆಸಿದ್ದರಿಂದ ಯೋಧರು ಸಾವನ್ನಪ್ಪಿದ್ದಾರೆ.
ಟಾಡ್ಬಾಲಿ ಗ್ರಾಮದ ಅರಣ್ಯದಲ್ಲಿ ಸಂಜೆ 5 ಗಂಟೆಗೆ ಬಿಎಸ್ಎಫ್ನ 121 ಬೆಟಾಲಿಯನ್ನ ಯೋಧರು ಮಣ್ಣಿನ ಕಚ್ಚಾ ರಸ್ತೆಯಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದ ವೇಳೆ ನೆಲದಲ್ಲಿ ಹುದುಗಿಸಿ ಇಟ್ಟಿದ್ದ ಸುಧಾರಿತ ಸ್ಫೋಟಕ ಬಳಸಿ ನಕ್ಸಲರು ಬೈಕ್ ಸ್ಫೋಟಿಸಿದ್ದಾರೆ. ತೀವ್ರ ಗಾಯಗೊಂಡ ಯೋಧರನ್ನು ಅರಣ್ಯದಿಂದ ಹೊರಗೆ ಕರೆದೊಯ್ಯುವಷ್ಟರಲ್ಲಿ ಸಾವಿಗೀಡಾಗಿದ್ದಾರೆ. ಭದ್ರತಾ ಪಡೆಗಳು ತಕ್ಷಣವೆ ಸ್ಥಳಕ್ಕೆ ಧಾವಿಸಿದ್ದು, ದಾಳಿಯಲ್ಲಿ ಭಾಗಿಯಾದ ನಕ್ಸಲರ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.