ಬಿರಿಯಾನಿ ಲವರ್ಗಾಗಿ ಮಕ್ಕಳಿಗೆ ವಿಷ ಹಾಕಿದ ತಾಯಿ!
ಇವಳೆಂತಾ ತಾಯಿ, ಪ್ರೀತಿಗಾಗಿ ಮಕ್ಕಳನ್ನು ಕೊಂದಳು! ಬಿರಿಯಾನಿ ಲವರ್ ಗಾಗಿ ಪತಿ, ಮಕ್ಕಳನ್ನೇ ಕೊಲ್ಲಲು ಸಂಚು! ಇಬ್ಬರು ಪುಟ್ಟ ಕಂದಮ್ಮಗಳಿಗೆ ವಿಷ ಹಾಕಿ ಓಡಿ ಹೋದ ಪಾಪಿ
ಚೆನ್ನೈ(ಸೆ.3): ಪ್ರೀತಿಸಿದವನ ಜೊತೆ ಓಡಿ ಹೋಗಲು ಮುಂದಾದ ಮಹಿಳೆಯೋರ್ವಳು, ತನ್ನ ಇಬ್ಬರು ಮಕ್ಕಳಿಗೆ ವಿಷ ಹಾಕಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಚೆನ್ನೈನಲ್ಲಿ ನಡೆದಿದೆ.
ಅಭಿರಾಮಣಿ ಮತ್ತು ವಿಜಯಕುಮಾರ್ ಎಂಬ ದಂಪತಿ ಕಳೆದ ೮ ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು,. ದಂಪತಿಗೆ ಅಜಯ್ ಮತ್ತು ಕರುಮಿಳಾ ಎಂಬ ಮಕ್ಕಳಿದ್ದರು. ಈ ನಡುವೆ ಅಭಿರಾಮಣಿಗೆ ತನ್ನ ಮನೆಯ ಹತ್ತಿರದಲ್ಲೇ ಇದ್ದ ಬಿರಿಯಾನಿ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ಸುಂದರಂ ಎಂಬಾತನೊಂದಿಗೆ ಪ್ರೇಮ ಸಂಬಂಧ ಬೆಳೆದಿದ್ದು, ಆತನೊಂದಿಗೆ ಓಡಿ ಹೋಗಲು ಆಕೆ ನಿರ್ಧರಿಸಿದ್ದಳು.
ಅದರಂತೆ ಅಭಿರಾಮಣಿ ಮತ್ತು ಸುಂದರಂ ಇಬ್ಬರೂ ಸೇರಿ ವಿಜಯ್ ಕುಮಾರ್ ಮತ್ತು ಇಬ್ಬರು ಮಕ್ಕಳನ್ನು ಕೊಲೆ ಮಾಡುವ ಯೋಜನೆ ರೂಪಿಸಿದ್ದರು. ಆದರೆ ಬ್ಯಾಂಕ್ ಉದ್ಯೋಗಿಯಾಗಿರುವ ವಿಜಯಕುಮಾರ್ ಮನೆಗೆ ತಡವಾಗಿ ಬರುವುದಾಗಿ ತಿಳಿಸಿ ಬ್ಯಾಂಕ್ ನಲ್ಲೇ ಉಳಿದುಕೊಂಡಿದ್ದರರು.
ಆದರೆ ಅದಾಗಲೇ ಓಡಿ ಹೋಗುವ ಯೋಜನೆ ರೂಪಿಸಿದ್ದ ಅಭಿರಾಮಣಿ ಮತ್ತು ಸುಂದರಂ, ಮಕ್ಕಳಾದ ಅಜಯ್ ಮತ್ತು ಕರುಮಿಳಾಗೆ ವಿಷ ಉಣಿಸಿ ಪರಾರಿಯಾಗಿದ್ದಾರೆ. ತಡವಾಗಿ ಮನೆಗೆ ಬಂದ ವಿಜಯಕುಮರ್ ತಮ್ಮ ಇಬ್ಬರು ಮಕ್ಕಳ ಮೃತದೇಹ ನೋಡಿ ದಂಗಾಗಿ ಹೋಗಿದ್ದಾರೆ.
ಸುದ್ದಿ ತಿಳಿದು ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಅಭಿರಾಮಣಿ ಮತಯ್ತು ಸುಂದರಂ ಓಡಿ ಹೋಗಿರುವುದನ್ನು ಖಚಿತಪಡಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಆರೋಪಿಗಳು ಹಲವು ಸಾಕ್ಷ್ಯಾಧಾರಗಳನ್ನು ಬಿಟ್ಟು ಹೋಗಿದ್ದು, ಶೀಘ್ರದಲ್ಲೇ ಇಬ್ಬರನ್ನೂ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.