ಶಿವಸೇನೆ ಬಳಿಕ ಬಿಜೆಪಿಗೆ ಮತ್ತೊಂದು ಮಿತ್ರ ಪಕ್ಷ ಬೈ-ಬೈ?
- ಸ್ಥಳೀಯ ಬಿಜೆಪಿ ನಾಯಕರ ‘ಕಾಟ’, ತೆಲುಗು ದೇಶಂ ಪಕ್ಷದ ಅಧ್ಯಕ್ಷ ಚಂದ್ರಬಾಬು ನಾಯ್ಡು ಸುಳಿವು
- ಮುಂದಿನ ಚುನಾವಣೆಗಳನ್ನು ಏಕಾಂಗಿಯಾಗಿಯೇ ಎದುರಿಸಲು ನಿರ್ಧರಿಸಿರುವ ಶಿವಸೇನೆ
ಅಮರಾವತಿ: ಬಿಜೆಪಿಯ ಹಳೆಯ ಮಿತ್ರಪಕ್ಷ ಶಿವಸೇನೆಯು ಮೈತ್ರಿಯನ್ನು ಕಡಿದುಕೊಳ್ಳಲು ನಿರ್ಧರಿಸಿರುವ ಬೆನ್ನಲ್ಲೇ, ತೆಲುಗು ದೇಶಂ ಪಕ್ಷದ ಅಧ್ಯಕ್ಷ ಚಂದ್ರಬಾಬು ನಾಯ್ಡು ಕೂಡಾ ಅಂತಹದ್ದೇ ಒಂದು ಸುಳಿವನ್ನು ನೀಡಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಾಯ್ಡು, ಬಿಜೆಪಿಗೆ ಮೈತ್ರಿ ಮುಂದುವರೆಸಲು ಇಚ್ಛೆ ಇಲ್ಲದಿದ್ದರೆ, ಟಿಡಿಪಿಯು ಕೂಡಾ ತನ್ನ ದಾರಿಯನ್ನು ನೋಡಿಕೊಳ್ಳುತ್ತದೆ, ಎಂದು ಹೇಳಿದ್ದಾರೆ.
ನಾವು ಮೈತ್ರಿಧರ್ಮವನ್ನು ಪಾಲಿಸುತ್ತಿದ್ದೇವೆ, ಆದರೆ ಬಿಜೆಪಿ ನಾಯಕರು ಮಿತಿಯನ್ನು ಮೀರುತ್ತಿದ್ದಾರೆ. ಎಂದು ನಾಯ್ಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಬಿಜೆಪಿ ನಾಯಕರು ಮಾಡುವ ಆರೋಪಗಳ ಬಗ್ಗೆ ಹೈಕಮಾಂಡ್ ಕ್ರಮ ಕೈಗೊಳ್ಳುವುದೆಂಬ ವಿಶ್ವಾಸವಿದೆ ಎಂದು ನಾಯ್ಡು ಈ ಸಂದರ್ಭದಲ್ಲಿ ಹೇಳಿದ್ದಾರೆ.
ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಾ ಬಂದಿದ್ದ ಶಿವಸೇನೆಯು ಕೂಡಾ ಮುಂದಿನ ಚುನಾವಣೆಯಲ್ಲಿ ಬಿಜೆಪಿಯೊಂದಿಗಿನ ಹಳೆಯ ಮೈತ್ರಿಯನ್ನು ತೊರೆಯುವುದಾಗಿ ಹೇಳಿದೆ.
ಕಳೆದ ಮೂರು ವರ್ಷಗಳಿಂದ ಬಿಜೆಪಿಯು ಶಿವಸೇನೆಯ ಸ್ಥೈರ್ಯವನ್ನು ಕುಗ್ಗಿಸುವ ಕೆಲಸ ಮಾಡುತ್ತಿದೆ. ಆದುದರಿಂದ 2019ರ ಲೋಕಸಭಾ ಚುನಾವಣೆ ಹಾಗೂ ಮುಂದಿನ ವಿಧಾನಸಭಾ ಚುನಾವಣೆಯನ್ನು ಏಕಾಂಗಿಯಾಗಿಯೇ ಎದುರಿಸುವ ನಿರ್ಣಯವನ್ನು ಜ. 23ರಂದು ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ತೆಗೆದುಕೊಳ್ಳಲಾಗಿದೆ.