3 ವರ್ಷದ ಬಾಲಕ ಮೂರು ಜೀವಗಳಿಗೆ ಹಂಚಿದ ‘ಆನಂದ’...ನೋವಿನಲ್ಲೂ ಸಾರ್ಥಕತೆ
ಇದೊಂದು ಸ್ಫೂರ್ತಿದಾಯಕ ಕತೆ. ನೋವಿನಲ್ಲೂ ಬೇರೆಯವರ ಜೀವನದಲ್ಲಿ ನಗು ಮೂಡಿಸಿದ ನಿದರ್ಶನ. ಮೂರು ವರ್ಷದ ಬಾಲಕನೊಬ್ಬ ಎರಡು ಮಕ್ಕಳಿಗೆ ಹಾಗೂ ಒಬ್ಬ ಯುವಕನಿಗೆ ಪುನರ್ ಜನ್ಮ ನೀಡಿದ ಸ್ಟೋರಿ.. ಈ ಪ್ರಕರಣ ನಿಮ್ಮ ಕಣ್ಣಲ್ಲಿ ಎರಡು ಹನಿ ನೀರು ತರಿಸಿದರೆ ಅಚ್ಚರಿ ಇಲ್ಲ.
ಚಂಡಿಘಡ[ಆ.26] ಚೂಟಿಯಾಗಿದ್ದ ಮೂರು ವರ್ಷದ ಹುಡುಗ ಆನಂದ ಬೇರೆಯವರ ಜೀವನದಲ್ಲಿ ನಗು ಮೂಡಿಸಿದ್ದಾನೆ. ಆತನ ಪಾಲಕರು ತೆಗೆದುಕೊಂಡ ದಿಟ್ಟ ನಿರ್ಧಾರ ಎಂಥವರ ಮನಸ್ಸನ್ನು ಒಮ್ಮೆ ಕರಗಿಸುತ್ತದೆ.
ಪಂಜಾಬಿನ ಹುಡುಗ ಒಂದು ಕೆಟ್ಟ ಘಳಿಗೆಯಲ್ಲಿ ಮಹಡಿಯಿಂದ ಕೆಳಗೆ ಬೀಳುತ್ತಾನೆ. ಈ ಬೀಳುವಿಕೆ ಅವನ ತಂದೆ ರೋಹಿತ್ ಕುಮಾರ್ ಜೀವನವನ್ನು ನೋವಿನ ಮಡುವಿನಲ್ಲಿ ಮುಳುಗಿಸಿ ಬಿಡುತ್ತದೆ
ಮಗು ಬದುಕುವುದಿಲ್ಲ ಎಂದು ವೈದ್ಯರು ಹೇಳಿದ ನಂತರ ಹಿಂದೆ ಮುಂದೆ ನೋಡದ ತಂದೆ ತಾಯಿ ಮಗುವಿನ ಅಂಗಾಂಗ ದಾನ ಮಾಡಲು ಸಿದ್ಧತಾಗುತ್ತಾರೆ. ನವದೆಹಲಿಯ ಒಬ್ಬ ಯುವಕ ಮತ್ತು ಇಬ್ಬರು ಮಕ್ಕಳು ಚೂಟಿ ಬಾಲಕ ಆನಂದನ ಅಂಗಾಂಗ ಪಡೆದುಕೊಳ್ಳುತ್ತಾರೆ.
ಆಗಸ್ಟ್ 20 ರಂದು ನಡೆದ ಅವಘಡ ಇದೀಗ ನೋವನ್ನು ಮಾತ್ರ ಉಳಿಸಿದೆ. ಆದರೆ ಅಂಗಾಂಗ ಪಡೆದುಕೊಂಡವರ ಬಾಳಲ್ಲಿ ಹೊಸ ಕಿರಣ ಮೂಡಿದೆ. ಮಗನ ಸಾವಿನ ದುರಂತವನ್ನು ಪೋಷಕರು ಸ್ವೀಕರಿಸಿದ್ದಲ್ಲದೇ ಅಂಗಾಂಗ ದಾನ ಮಾಡಿ ನೋವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಗ್ರೀನ್ ಕಾರಿಡಾರ್ ಮೂಲಕ ಚಂಡೀಘಡದಿಂದ ದೆಹಲಿಗೆ ಜೀವಂತ ಅಂಗಾಂಗ ರವಾನೆ ಮಾಡಿದ ಸಾಃಸದ ಕತೆಯೂ ಇದರೊಂದಿಗೆ ಸೇರಿಕೊಳ್ಳುತ್ತದೆ. ಕರ್ನಾಟಕದ ಯುವಕ ಹರೀಶ್ ತಮ್ಮ ಕೊನೆ ಕ್ಷಣದಲ್ಲಿ ಅಂಗಾಂಗ ದಾನ ಮಾಡಲು ಹೇಳಿ ನಿಜವಾದ ನಾಯಕನಂತೆ ಮರೆಯಾಗಿದ್ದನ್ನು ಕನ್ನಡಿಗರು ಇಂದಿಗೂ ಸ್ಮರಿಸುತ್ತಿದ್ದಾರೆ.