ಸಿಟ್ಟಿನಿಂದ ಮೈಕ್ ಕಿತ್ತೆಸೆದ ಚೆಲುವರಾಯಸ್ವಾಮಿ
ಚೆಲುವರಾಯಸ್ವಾಮಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸಂಬಂಧ ಕಾರ್ಯರ್ತರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದರು. ಕಾರ್ಯಕರ್ತರ ಮೇಲೆ ಸಿಟ್ಟುಗೊಂಡು ಮೈಕ್ ನ್ನು ಕಿತ್ತೆಸದ ಘಟನೆ ನಾಗಮಂಗಲದಲ್ಲಿ ನಡೆಯಿತು.
ಮಂಡ್ಯ/ನಾಗಮಂಗಲ: ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಭಾನುವಾರ ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ತೋಡಿಕೊಂಡರು.
ಈ ವೇಳೆ ಒಂದು ಹಂತದಲ್ಲಿ ಮಾಜಿ ಶಾಸಕ ಎನ್.ಚಲುವರಾಯಸ್ವಾಮಿ ಮತ್ತು ಕಾರ್ಯಕರ್ತರ ನಡುವೆ ಈ ವಿಚಾರವಾಗಿ ವಾಗ್ವಾದವೂ ನಡೆಯಿತು. ನಾಗಮಂಗಲ ತಾಲೂಕು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಶಾಸಕ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ನಡೆದ ಮೈತ್ರಿ ಧರ್ಮ ಪಾಲಿಸುವ ಸಂಬಂಧ ಸಭೆ ಕರೆಯಲಾಗಿತ್ತು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಒಂದು ಹಂತದಲ್ಲಿ ಚಲುವರಾಯಸ್ವಾಮಿ ವಿರುದ್ಧ ನೇರ ಹರಿಹಾಯ್ದರು. ಜೆಡಿಎಸ್ ನಾಯಕರ ನಡವಳಿಕೆಯನ್ನು ಬಲವಾಗಿ ವಿರೋಧಿಸಿದರು.
ಈ ವೇಳೆ ಕಾರ್ಯಕರ್ತರನ್ನು ಸಮಾಧಾನಪಡಿಸಲು ಪ್ರಯತ್ನಿಸಿ ಸೋತ ಚಲುವರಾಯಸ್ವಾಮಿ, ನೀವು (ಕಾರ್ಯಕರ್ತರು) ಸರಿ ಇದ್ದಿದ್ರೆ, ಈ ಗತಿ ಬರುತ್ತಿರಲಿಲ್ಲ ಎಂದು ಮೈಕ್ ಕಿತ್ತೆಸೆದರು. ನಂತರ ಕೆಲ ಹೊತ್ತಿನಲ್ಲಿ ತಾವೇ ಎಲ್ಲರನ್ನು ಸಮಾಧಾನ ಮಾಡಿದರು. ಕಳೆದ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರವಿಡಲು ರಾಷ್ಟ್ರೀಯ ಅಧ್ಯಕ್ಷರು ಮೈತ್ರಿಗೆ ನಿರ್ಧರಿಸಿದರು.
ರಾಷ್ಟ್ರದ ಮತ್ತು ರಾಜ್ಯದ ಹಿತದೃಷ್ಟಿಯಿಂದ ಈ ಮೈತ್ರಿ ಅನಿವಾರ್ಯವೂ ಆಗಿತ್ತು. ನಾವು ರಾಷ್ಟ್ರ ನಾಯಕರ ಮತ್ತು ಪಕ್ಷದ ಆದೇಶ ಪಾಲಿಸಬೇಕಾಗಿದೆ ಎಂದರು.