ಕಾವೇರಿ ಸ್ಕೀಂ: ಸುಪ್ರೀಂಗೆ ಕರಡು ಸಲ್ಲಿಸಿದ ಕೇಂದ್ರ ಸರಕಾರ
ಕಾವೇರಿ ನೀರಿನ ಹಂಚಿಕೆಗೆ ತಾನು ರೂಪಿಸಿದ ಕರಡು ಯೋಜನೆಯನ್ನು ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಹೊರ ಬೀಳುವ ದಿನಕ್ಕೂ ಮುನ್ನ ದಿನ ಸುಪ್ರೀಂ ಕೋರ್ಟಿಗೆ ಕೇಂದ್ರ ಸರಕಾರ ಸಲ್ಲಿಸಿದೆ.
ನವದೆಹಲಿ: ಕಾವೇರಿ ನೀರಿನ ಹಂಚಿಕೆಗೆ ತಾನು ರೂಪಿಸಿದ ಕರಡು ಯೋಜನೆಯನ್ನು ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಹೊರ ಬೀಳುವ ದಿನಕ್ಕೂ ಮುನ್ನ ಸುಪ್ರೀಂ ಕೋರ್ಟಿಗೆ ಕೇಂದ್ರ ಸರಕಾರ ಸಲ್ಲಿಸಿದೆ.
ಕೇಂದ್ರ ಜಲ ಸಂಪನ್ಮೂಲ ಕಾರ್ಯದರ್ಶಿ ಯು.ಪಿ.ಸಿಂಗ್ ಖುದ್ದು ಹಾಜರಿರುವಂತೆ ಕೋರ್ಟ್ ಮೇ 8ರಂದು ಸಮನ್ಸ್ ಕಳುಹಿಸಿದ್ದು, ಸೋಮವಾರ ಕರಡು ಪ್ರತಿಯೊಂದಿಗೆ ಅವರು ಹಾಜರಿದ್ದರು.
ನ್ಯಾ.ದೀಪಕ್ ಮಿಶ್ರಾ ನೇತೃತ್ವದ ಪೀಠ ಕರಡು ಪ್ರತಿಯನ್ನು ಸ್ವೀಕರಿಸಿದ್ದು, ಜಲ ಸ್ವಾಮ್ಯತೆ ಅಥವಾ ಕಾನೂನಾತ್ಮಕವಾಗಿ ಈ ಕರಡನ್ನು ಕೋರ್ಟ್ ಪರಿಗಣಿಸುವುದಿಲ್ಲ. ಕರ್ನಾಟಕ, ತಮಿಳು ನಾಡು, ಪುದುಚೆರಿ ಅಥವಾ ಕೇರಳದಿಂದ ಮತ್ತೊಂದು ರೀತಿಯ ಸುದೀರ್ಘ ಕಾನೂನು ಹೋರಾಟ ಬೇಡವೆಂದು ಹೇಳಿದ್ದಾರೆ.
ಮೇ 3ರಂದು ಕಾವೇರಿ ಸ್ಕೀಮ್ ಕುರಿತ ಕರಡು ಸಿದ್ಧಪಡಿಸಿ ಸಲ್ಲಿಸುವಂತೆ ಈ ಹಿಂದೆ ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಆದರೆ, ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತ್ತು ವಿವಿಧ ಸಚಿವರು ಹಾಗೂ ಪ್ರಧಾನಿ ಅಲಭ್ಯತೆ ಹಿನ್ನೆಲೆಯಲ್ಲಿ ಕರಡು ಸಲ್ಲಿಸರು ಕೇಂದ್ರ ಸರಕಾರ ಅಸಹಾಯಕತೆ ವ್ಯಕ್ತಪಡಿಸಿತ್ತು. ಸರಕಾರದ ಈ ವಿಳಂಬ ಧೋರಣೆಗೆ ಕೋರ್ಟ್ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.
ಇದೀಗ ಕರ್ನಾಟಕ ವಿಧಾನಸಭೆಗೆ ಚುನಾವಣೆ ಮುಗಿದ ಹಿನ್ನೆಲೆಯಲ್ಲಿ ಸರಕಾರ ಕರಡು ಪ್ರತಿಯನ್ನು ಸಲ್ಲಿಸಿದೆ.