ಕೆಂದ್ರ ಸಚಿವ ಸಂಪುಟ ಸರ್ಜರಿಗೆ ಭರ್ಜರಿ ಸಿದ್ಧತೆ: ರಾಜ್ಯ ಸಂಸದರಿಗೆ ಸಚಿವ ಸ್ಥಾನ?
ಪ್ರಧಾನಿ ಮೋದಿ ಸಚಿವ ಸಂಪುಟಕ್ಕೆ ಭರ್ಜರಿ ಸರ್ಜರಿ ಮಾಡಲು ಮುಂದಾಗಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆ ಹಾಗೂ ಗುಜರಾತ್ ಹಾಗೂ ಕರ್ನಾಟಕ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟು, ಸಂಪುಟ ಪುನರ್ ರಚನೆಗೆ ಮುಂದಾಗಿದ್ದಾರೆ. ಹೀಗಾಗಿ ನಿನ್ನೆಯೆ ಉಮಾಭಾರತಿ, ರಾಜೀವ್ ಪ್ರತಾಪ್ ರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಧ ಮೋಹನ್ ಸಿಂಗ್, ಸಂಜೀವ್ ಬಾಲ್ಯನ್ ಮತ್ತು ಗಿರಿರಾಜ್ ಸಿಂಗ್ ಕೂಡ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ನವದೆಹಲಿ(ಸೆ.01): ಪ್ರಧಾನಿ ಮೋದಿ ಸಚಿವ ಸಂಪುಟಕ್ಕೆ ಭರ್ಜರಿ ಸರ್ಜರಿ ಮಾಡಲು ಮುಂದಾಗಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆ ಹಾಗೂ ಗುಜರಾತ್ ಹಾಗೂ ಕರ್ನಾಟಕ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟು, ಸಂಪುಟ ಪುನರ್ ರಚನೆಗೆ ಮುಂದಾಗಿದ್ದಾರೆ. ಹೀಗಾಗಿ ನಿನ್ನೆಯೆ ಉಮಾಭಾರತಿ, ರಾಜೀವ್ ಪ್ರತಾಪ್ ರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಧ ಮೋಹನ್ ಸಿಂಗ್, ಸಂಜೀವ್ ಬಾಲ್ಯನ್ ಮತ್ತು ಗಿರಿರಾಜ್ ಸಿಂಗ್ ಕೂಡ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ನಾಳೆ ಅಥವಾ ಭಾನುವಾರ ಸಚಿವಸಂಪುಟ ವಿಸ್ತರಣೆ ಮಾಡಲು ಮೋದಿ ಮುಂದಾಗಿದ್ದಾರೆ ಎನ್ನಲಾಗಿದೆ. ಮುಂದಿನ ವರ್ಷ ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಕೆಲ ಸಂಸದರಿಗೆ ಕೇಂದ್ರ ಸಚಿವರಾಗುವ ಅದೃಷ್ಟವಿದೆ ಎನ್ನಲಾಗ್ತಿದೆ. ನಿರೀಕ್ಷೆಯಂತೆ ಜೆಡಿಯು, ಎನ್ಸಿಪಿ ಕೂಡ ಎನ್ಡಿಎ ಮೈತ್ರಿಕೂಟ ಸೇರಿಕೊಳ್ಳುವ ಸಾಧ್ಯತೆ ಇದೆ. ಎನ್ಸಿಪಿ ಮುಖಂಡ ಶರದ್ ಪವಾರ್ಗೂ ಕೂಡ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎಂದು ಹೇಳಲಾಗ್ತಿದೆ. ರೈಲ್ವೇ ಸಚಿವ ಸುರೇಶ್ ಪ್ರಭು ಅವರನ್ನು ಸಂಪುಟದಿಂದ ಕೈ ಬಿಡುವ ಸಾಧ್ಯತೆ ಇದೆ.
ಇತ್ತ ಸದಾನಂದ ಗೌಡ ಖಾತೆಯಲ್ಲಿ ಕೂಡ ಬದಲಾವಣೆಯಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಗೋವಾ ಚುನಾವಣೆ ಹಿನ್ನಲೆಯಲ್ಲಿ ರಕ್ಷಣಾ ಖಾತೆ ಹೊಂದಿದ್ದ ಮನೋಹರ್ ಪರಿಕ್ಕರ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ರಾಜ್ಯ ರಾಜಕಾರಣಕ್ಕೆ ಮರಳಿದ್ದರು. ಇನ್ನು ಉಪ ರಾಷ್ಟ್ರಪತಿ ಚುನಾವಣೆಗಾಗಿ ವೆಂಕಟಯ್ಯ ನಾಯ್ಡು ಅವರೂ ಕೂಡ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಇದಲ್ಲದೆ ಅತ್ತ ತಮಿಳುನಾಡಿನಲ್ಲಿ ಎಐಎಡಿಎಂಕೆ ಪಕ್ಷ ಬಣ ರಾಜಕೀಯ ಮರೆತು ಪ್ರಧಾನಿ ಮೋದಿ ಅವರ ಸಲಹೆಯಂತೆ ವಿಲೀನವಾಗಿದೆ.
ಹೀಗಾಗಿ ಭಾನುವಾರದ ಸಚಿವ ಸಂಪುಟ ವಿಸ್ತರಣೆ ವೇಳೆ ತೆರವಾಗಿರುವ ಎರಡು ಸ್ಥಾನ ಹಾಗೂ ಹೆಚ್ಚುವರಿಯಾಗಿ ಉಳಿದಿರುವ ಸ್ಥಾನಗಳಿಗೆ ಸಚಿವರನ್ನು ನೇಮಕ ಮಾಡುವ ಸಾಧ್ಯತೆ ಇದೆ.