ಕೆಂಪಾದ ಕಾವೇರಿ ನೀರು
ಕಾವೇರಿ ನದಿ ಈಗ ಕೆಂಪಾಗಿದೆ. ಮನೆಗಳಿಗೆ ಪೂರೈಕೆಯಾಗುತ್ತಿರುವ ನೀರು ಸಂಪೂರ್ಣ ಕೆಂಪು ಬಣ್ಣಕ್ಕೆ ತಿರುಗಿದೆ. ಕೊಡಗು ಜಿಲ್ಲೆಯಲ್ಲಿ ಆಗಿರುವ ಭೂ ಕುಸಿತದ ಪರಿಣಾಮವಾಗಿ ನೀರು ಸಂಪೂರ್ಣ ಕೆಸರುಮಯವಾಗಿದೆ.
ಬೆಂಗಳೂರು: ರಾಜ್ಯಾದ್ಯಂತ ಮಳೆ ಕ್ಷೀಣಿಸಿದ್ದು, ಜನರು ನಿಟ್ಟುಸಿರು ಬಿಡುವಂತಾಗಿದೆ. ಕರಾವಳಿ, ಮಳೆನಾಡು ಸೇರಿದಂತೆ ಬೆಳಗಾವಿ, ಧಾರವಾಡದಲ್ಲಿ ಅಲ್ಪ ಪ್ರಮಾಣದಲ್ಲಿ ಮಾತ್ರ ಮಳೆ ದಾಖಲಾಗಿದೆ. ಆದರೆ, ಕಳೆದ ವಾರ ಮಳೆ ಅಬ್ಬರದಿಂದಾಗಿ ಆಗಿರುವ ಹಾನಿಯನ್ನು ಸರಿಪಡಿಸುವುದೇ ದೊಡ್ಡ ಸವಾಲಾಗಿದೆ.
ಉತ್ತರ ಕನ್ನಡ, ಧಾರವಾಡ, ಶಿವಮೊಗ್ಗ, ಬೆಳಗಾವಿ, ಚಿಕ್ಕಮಗಳೂರು ಜಿಲ್ಲೆಯ ಬಹುತೇಕ ತಾಲೂಕಿನಲ್ಲಿ ಆಗೊಮ್ಮೆ ಈಗೊಮ್ಮೆ ಮಳೆ ಸುರಿಯುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ 2 ಕಡೆ ಗುಡ್ಡ ಕುಸಿಯುವ ಭೀತಿ ಎದುರಾಗಿದೆ. 2 ಮನೆಗಳು ಭಾಗಶಃ ಕುಸಿದಿವೆ. ಕೊಡಗು ಜಿಲ್ಲೆಯಲ್ಲಿ ಆಗಿರುವ ಭೂ ಕುಸಿತದ ಮಣ್ಣು ನೇರವಾಗಿ ನದಿ ಸೇರಿದ್ದರಿಂದ ಕಾವೇರಿ ನದಿ ನೀರು ಕೆಂಪು ಬಣ್ಣಕ್ಕೆ ತಿರುಗಿದೆ.
ಶ್ರೀರಂಗಪಟ್ಟಣ, ಗಂಜಾಂ, ನಗುವನಹಳ್ಳಿ, ಮೇಳಾಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಗೆ ಕಾವೇರಿ ನೀರನ್ನು ಕುಡಿಯುವ ಉದ್ದೇಶದಿಂದ ಪೂರೈಕೆ ಮಾಡಲಾಗುತಿದೆ. ಆದರೆ ಈ ನೀರು ಕೆಂಪು ಮಿಶ್ರಿತ ಬಣ್ಣದಿಂದ ಕೂಡಿದೆ. ರಾಮನಾಥಪುರದಲ್ಲಿ ಇತ್ತೀಚೆಗೆ ಎಡೆಬಿಡದೇ ಸುರಿಯುತ್ತಿದ್ದ ಮಳೆ ಎರಡು ದಿನಗಳಿಂದ ಬಿಡುವು ನೀಡಿದೆ.
ಇದರಿಂದ ಬತ್ತದ ಕೃಷಿ ಚಟುವಟಿಕೆ ಗರಿಗೆದರಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಬಿಡುವು ಕೊಟ್ಟಿತ್ತು. ಆದರೆ, ತಾಲೂಕಿನ ಬೊಗಸೆ ಗ್ರಾಮದ ಬಳಿ ರಸ್ತೆ ಕುಸಿದಿದ್ದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ.