ಸಚಿವ ದೇಶಪಾಂಡೆ ಕಾರಿಗೆ ದಾರಿ ಬಿಡದ ಚಾಲಕನ ವಿರುದ್ಧ ಕೇಸ್?
ಕಂದಾಯ ಸಚಿವ ಆರ್.ವಿ ದೇಶಪಾಂಡೆ ಅವರ ಕಾರಿಗೆ ದಾರಿ ಬಿಡದ ಬಸ್ ಚಾಲಕನ ಮೇಲೆ ಪ್ರಕರಣ ದಾಖಲಿಸಲು ಸೂಚಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡ [ಜೂ.15] : ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರ ಕಾರಿಗೆ ದಾರಿ ಬಿಡಲು ವಿಳಂಬ ಮಾಡಿದ ಆರೋಪದ ಮೇಲೆ ಸಾರಿಗೆ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲು ಸಚಿವರ ಆಪ್ತ ಕಾರ್ಯದರ್ಶಿ ಸೂಚನೆ ನೀಡಿದ ಘಟನೆ ಶುಕ್ರವಾರ ಧಾರವಾಡದಲ್ಲಿ ನಡೆದಿದೆ.
ಧಾರವಾಡದ ಹಳೆ ಬಸ್ನಿಲ್ದಾಣ ಮುಂಭಾಗ ಈ ಘಟನೆ ನಡೆದಿದೆ. ಹೊಸವಾಳಕ್ಕೆ ಹೊರಟಿದ್ದ ಬಸ್, ನಿಲ್ದಾಣದಿಂದ ಹೊರ ಬರುವ ವೇಳೆ ಏಕಾಏಕಿ ದೇಶಪಾಂಡೆ ಅವರ ವಾಹನ ಬಂದಿದೆ.
ಇದನ್ನು ಗಮನಿಸದ ಚಾಲಕ ಬಸ್ ಚಾಲನೆ ಮಾಡಿದ್ದಾರೆ. ಈ ವೇಳೆ ಸಚಿವರ ವಾಹನಕ್ಕೆ ದಾರಿ ಬಿಡಲಿಲ್ಲ ಎಂದು ಕೋಪದಿಂದ ಸಚಿವರ ಆಪ್ತ ಚಾಲಕನ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಜತೆಗೆ ಬಸ್ ಚಾಲಕನ ಮೇಲೆ ಪ್ರಕರಣ ದಾಖಲಿಸುವಂತೆ ಪೊಲೀಸರ ಮೇಲೆ ಒತ್ತಡವನ್ನೂ ಹೇರಿದ್ದಾರೆ ಎಂದೂ ತಿಳಿದು ಬಂದಿದೆ.