ಪಂಜಾಬ್ ಸಿಎಂ ಆಗಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಪ್ರಮಾಣ; ಸಿಧುಗೆ ಸಂಪುಟ ಖಾತೆ
ಕಿಕ್ಕಿರಿದು ಸೇರಿದ್ದ ಸಭಾಂಗಣದಲ್ಲಿ ವಿಪಕ್ಷ ನಾಯಕ ಆಮ್ ಆದ್ಮಿಯ ಮುಖಂಡರಿಗೆ ಕೂರಲು ಸ್ಥಳವೇ ಸಿಗಲಿಲ್ಲವೆನ್ನಲಾಗಿದೆ.
ಚಂಡೀಗಡ(ಮಾ. 16): ಪಂಜಾಬ್'ನಲ್ಲಿ ಕಾಂಗ್ರೆಸ್ ಗೆಲುವಿನ ಸೂತ್ರಧಾರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಆ ರಾಜ್ಯದ 26ನೇ ಮುಖ್ಯಮಂತ್ರಿಯಾಗಿದ್ದಾರೆ. ಇಲ್ಲಿಯ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಿ.ಪಿ. ಸಿಂಗ್ ಬದ್ನೋರ್ ಅವರಿಂದ ಕ್ಯಾಪ್ಟನ್ ಪ್ರಮಾಣವಚನ ಸ್ವೀಕರಿಸಿದರು. ಪಂಜಾಬ್'ನ ಪ್ರದೇಶ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರೂ ಆಗಿರುವ ಅಮರಿಂದರ್ ಸಿಂಗ್ ಮುಖ್ಯಮಂತ್ರಿಯಾಗುತ್ತಿರುವುದು ಇದು ಎರಡನೇ ಬಾರಿ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಹಿರಿಯ ಮುಖಂಡರನೇಕರು ಈ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಕಿಕ್ಕಿರಿದು ಸೇರಿದ್ದ ಸಭಾಂಗಣದಲ್ಲಿ ವಿಪಕ್ಷ ನಾಯಕ ಆಮ್ ಆದ್ಮಿಯ ಮುಖಂಡರಿಗೆ ಕೂರಲು ಸ್ಥಳವೇ ಸಿಗಲಿಲ್ಲವೆನ್ನಲಾಗಿದೆ.
ಇದೇ ವೇಳೆ, ಬಿಜೆಪಿಯಿಂದ ಸಿಡಿದು ಕಾಂಗ್ರೆಸ್'ಗೆ ಹೋಗಿದ್ದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮಾಜಿ ಸಿಎಂ ಪ್ರಕಾಶ್ ಸಿಂಗ್ ಬಾದಲ್ ಸೋದರ ಮನ್'ಪ್ರೀತ್ ಬಾದಲ್, ಸಾಧು ಸಿಂಗ್ ಧರ್ಮಸೋತ್, ಬ್ರಹ್ಮ್ ಮೋಹೀಂದ್ರ, ಅರುಣಾ ಚೌಧರಿ ಮೊದಲಾದವರೂ ಪ್ರಮಾಣ ಸ್ವೀಕರಿಸಿದರು.