-ಶೀಘ್ರ ಮಸೂದೆ ಮಂಡನೆಗೆ ಕೇಂದ್ರ ಸಿದ್ಧತೆ - ವದಂತಿ ಅನಾಹುತ ತಡೆಗಟ್ಟಲು ಕಠಿಣ ಕ್ರಮ

ಯವತ್ಮಾಲ್ (ಮಹಾರಾಷ್ಟ್ರ): ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳನ್ನು ನಂಬಿ ಜನರ ಗುಂಪು ಅಮಾಯಕ ಜನರನ್ನು ಥಳಿಸಿ ಹತ್ಯೆ ಮಾಡುತ್ತಿರುವ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಇಂಥ ಪ್ರಕರಣದ ದೋಷಿಗಳಿಗೆ ಗಲ್ಲು ಶಿಕ್ಷೆ ನೀಡುವಂಥ ಕಾನೂನು ಜಾರಿಗೆ ನಿರ್ಧರಿಸಿದೆ.

Add Asianetnews Kannada as a Preferred SourcegooglePreferred

ಮಹಾರಾಷ್ಟ್ರದ ನಾಥ್‌ ಜೋಗಿ ಸಮುದಾಯದ ನಿಯೋಗದೊಂದಿಗೆ ಮಾತನಾಡಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಹಂಸರಾಜ್ ಅಹೀರ್, ಅಮಾಯಕರನ್ನು ಬಡಿದು ಕೊಲ್ಲುವುದು ಅನಾಗರಿಕ ಸಂಸ್ಕೃತಿ ಹಾಗೂ ನಾಗರಿಕ ಸಮಾಜ ಇದನ್ನು ಒಪ್ಪುವುದಿಲ್ಲ. ಇಂಥ ಘಟನೆಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿ, ದೋಷಿಗಗಳಿಗೆ ಗಲ್ಲು ಶಿಕ್ಷೆ ನೀಡುವಂಥ ಮಸೂದೆಯನ್ನು ಶೀಘ್ರದಲ್ಲೇ ಮಂಡಿಸಲಾಗುವುದು ಎಂದು ಹೇಳಿದ್ದಾರೆ.

ಗೋವು ಕಳ್ಳ ಸಾಗಣೆ ಮತ್ತು ಮಕ್ಕಳ ಕಳ್ಳರ ವದಂತಿಯನ್ನು ನಂಬಿ ಗಂಪು ಥಳಿತದ ಹಿಂಸಾಚಾರಗಳು, ಮುಗ್ಧ ಜನರ ಹತ್ಯೆಗಳು ನಡೆಯುತ್ತಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವ ಹೊತ್ತಿನಲ್ಲೇ ಸಚಿವರ ಹೇಳಿಕೆ ಹೊರಬಿದ್ದಿದ್ದು, ಮಹತ್ವ ಪಡೆದುಕೊಂಡಿದೆ.

ಸೊಲ್ಹಾಪುರ ಜಿಲ್ಲೆಯ ನಾಥ್‌ಜೋಗಿ ಸಮುದಾಯದ 5 ಮಂದಿ ಸದಸ್ಯರನ್ನು ಮಕ್ಕಳ ಕಳ್ಳರು ಎಂದು ಭ್ರಮಿಸಿ ಜನರ ಗುಂಪು ಮಹಾರಾಷ್ಟ್ರದ ಧುಲೆ ಜಿಲ್ಲೆಯಲ್ಲಿ ಇತ್ತೀಚೆಗೆ ಹತ್ಯೆ ಮಾಡಿತ್ತು. ಈ ಘಟನೆ ಬಗ್ಗೆ ಅಹೀರ್ ವಿಷಾದ ವ್ಯಕ್ತಪಡಿಸಿದ್ದಾರೆ