ಆರೆಸ್ಸೆಸ್ ಸ್ವಯಂಸೇವಕನ ಹತ್ಯೆ: ಸೋಮವಾರ ಶಿವಾಜಿನಗರ ಬಂದ್'ಗೆ ಕರೆ
ರುದ್ರೇಶ್ ಹತ್ಯೆಗೆ ವೈಯಕ್ತಿಕ ಧ್ವೇಷ ಕಾರಣವಿರಬಹುದೆಂದು ಶಂಕಿಸಿರುವ ಪೊಲೀಸರ ವಾದವನ್ನು ಬಿಜೆಪಿ ನಾಯಕರು ಖಂಡಿಸಿದ್ದಾರೆ. ಇನ್ನೂ ಪ್ರಾಥಮಿಕ ತನಿಖೆ ನಡೆದೇ ಇಲ್ಲ. ಈಗಲೇ ಪೊಲೀಸ್ ಆಯುಕ್ತರು ಇಂತಹ ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದ ಸಂಗತಿ ಎಂದು ಬಿಜೆಪಿ ನಾಯಕ ಅರವಿಂದ್ ಲಿಂಬಾವಳಿ ಟೀಕಿಸಿದ್ದಾರೆ.
ಬೆಂಗಳೂರು(ಅ. 16): ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಖಂಡಿಸಿ ಸಂಘವು ನಾಳೆ ಶಿವಾಜಿನಗರ ಬಂದ್'ಗೆ ಕರೆ ನೀಡಿದೆ. ವಿವಿಧ ಹಿಂದೂ ಸಂಘಟನೆಗಳು ಈ ಬಂದ್'ಗೆ ಬೆಂಬಲ ಸೂಚಿಸುವ ಸಾಧ್ಯತೆ ಇದೆ. ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಆರ್.ಅಶೋಕ್ ನೇತೃತ್ವದಲ್ಲಿ ನಾಳೆ ಸೋಮವಾರ ನಗರ ಪೊಲೀಸ್ ಆಯುಕ್ತರ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ.
ನಾಳೆ ರುದ್ರೇಶ್ ಮರಣೋತ್ತರ ಪರೀಕ್ಷೆ ನಡೆಯಲಿರುವ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಇದೇ ವೇಳೆ, ಪ್ರಕರಣದ ಬಗ್ಗೆ ಮಾಹಿತಿ ಪಡೆಯುತ್ತಿದ್ದು, ಆರೋಪಿಗಳನ್ನು ಶೀಘ್ರವೇ ಬಂಧಿಸುತ್ತೇವೆ ಎಂದು ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ಭರವಸೆ ನೀಡಿದ್ದಾರೆ.
ಪೊಲೀಸರ ವಾದಕ್ಕೆ ಆಕ್ರೋಶ:
ರುದ್ರೇಶ್ ಹತ್ಯೆಗೆ ವೈಯಕ್ತಿಕ ಧ್ವೇಷ ಕಾರಣವಿರಬಹುದೆಂದು ಶಂಕಿಸಿರುವ ಪೊಲೀಸರ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಪ್ರಾಥಮಿಕ ತನಿಖೆ ನಡೆದೇ ಇಲ್ಲ. ಈಗಲೇ ಪೊಲೀಸ್ ಆಯುಕ್ತರು ಇಂತಹ ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದ ಸಂಗತಿ ಎಂದು ಬಿಜೆಪಿ ನಾಯಕ ಅರವಿಂದ್ ಲಿಂಬಾವಳಿ ಟೀಕಿಸಿದ್ದಾರೆ. ನಗರದಲ್ಲಿ ಆರೆಸ್ಸೆಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಯುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಘಟನೆಗಳನ್ನು ಬಿಜೆಪಿ ಸಹಿಸೋದಿಲ್ಲ. ಗೃಹ ಸಚಿವರಿಗೆ ಕಾವೇರಿ ವಿಚಾರದ ಗಲಾಟೆಯಲ್ಲಿ ಆರೆಸ್ಸೆಸ್ ನೆನಪಾಗುತ್ತೆ. ಈಗ ಸ್ವಯಂಸೇವಕನ ಹತ್ಯೆಯಾಗಿದ್ದರೂ ಗೃಹಸಚಿವರು ರಾಜಕೀಯ ಹೇಳಿಕೆ ಕೊಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.