ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಚಿವರ ಇಂಥ ಪ್ರತಿಯೊಂದು ಸಭೆಗಳ  ಫೋಟೊಗಳನ್ನು ಬಿಡುಗಡೆಗೊಳಿಸುವಾಗ  ಫೋಟೊಗಳೊಂದಿಗೆ ‘‘ಮುಖ್ಯಮಂತ್ರಿಯವರ ಆದೇಶದ ಅನುಸಾರ ಇಂಥ ನಿರ್ಣಯ ಕೈಗೊಳ್ಳಲಾಗಿದೆ,’’ ಎಂಬ ಶೀರ್ಷಿಕೆ ನೀಡುತ್ತದೆ

ಚೆನ್ನೈ(ಅ.16): ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅನಾರೋಗ್ಯದಿಂದ ಆಸ್ಪತ್ರೆ ದಾಖಲಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಸಿಎಂ ಆದೇಶದ ಆಧಾರದಲ್ಲಿ ಸರ್ಕಾರದ ನಿರ್ಧಾರಗಳು, ಅಲ್ಲಿನ ವಿಧಾನಸಭಾ ಕಾರ್ಯಾಲಯಗಳಲ್ಲಿ ಅವರ ಫೋಟೊದ ಸಮ್ಮುಖದಲ್ಲೇ ಜಾರಿಗೊಳ್ಳುತ್ತಿವೆ ಎಂಬ ಕುತೂಹಲಕಾರಿ ವಿಚಾರದ ಬಗ್ಗೆ ‘ದ ಇಕನಾಮಿಕ್ ಟೈಮ್ಸ್’ ವರದಿ ಮಾಡಿದೆ. ವಿಧಾನಸಭಾ ಕಾರ್ಯಾಲಯಗಳಲ್ಲಿ ಸಚಿವರುಗಳು ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸುವಾಗ, ಸಿಎಂ ಜಯಲಲಿತಾರ ಫೋಟೊವನ್ನಿಟ್ಟು ಅವರ ಆದೇಶದ ಹಿನ್ನೆಲೆಯಲ್ಲಿ ನಿರ್ಧಾರಗಳನ್ನು ಜಾರಿಗೊಳಿಸುತ್ತಿದ್ದಾರೆ.

ಸಚಿವರುಗಳು ಜಯಲಲಿತಾರ ಭಾವಚಿತ್ರ ಇರಿಸಿ, ಅವರು ಸಭೆ ಕಲಾಪಗಳನ್ನು ಗಮನಿಸುತ್ತಿದ್ದಾರೆ ಎಂಬ ಭಾವನೆಯನ್ನಿಟ್ಟುಕೊಂಡು ಸಭೆ ನಡೆಸುತ್ತಿದ್ದಾರೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಚಿವರ ಇಂಥ ಪ್ರತಿಯೊಂದು ಸಭೆಗಳ ಫೋಟೊಗಳನ್ನು ಬಿಡುಗಡೆಗೊಳಿಸುವಾಗ ಫೋಟೊಗಳೊಂದಿಗೆ ‘‘ಮುಖ್ಯಮಂತ್ರಿಯವರ ಆದೇಶದ ಅನುಸಾರ ಇಂಥ ನಿರ್ಣಯ ಕೈಗೊಳ್ಳಲಾಗಿದೆ,’’ ಎಂಬ ಶೀರ್ಷಿಕೆ ನೀಡುತ್ತದೆ. ಅನಾರೋಗ್ಯ ಪೀಡಿತರಾಗಿರುವ ಜಯಲಲಿತಾ ಈ ಆದೇಶಗಳನ್ನು ಹೇಗೆ ನೀಡಿದರು ಎಂಬ ಬಗ್ಗೆ ಇಲಾಖೆ ಪ್ರತಿಕ್ರಿಯಿಸಿಲ್ಲ.