ಬೆಂಗಳೂರಲ್ಲಿ 2 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ
ಬೆಂಗಳೂರಲ್ಲಿ 2 ಕಡೆ ಉಪ ಚುನಾವಣೆ ಘೋಷಣೆ ಮಾಡಲಾಗಿದೆ. ಇದೇ ಮೇ 29 ರಂದು ಚುನಾವಣೆ ನಡೆಯಲಿದೆ.
ಬೆಂಗಳೂರು : ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಜತೆಗೆ ಬಿಬಿಎಂಪಿಯ ಇಬ್ಬರು ಸದಸ್ಯರ ಸಾವಿನಿಂದ ತೆರವಾದ ವಾರ್ಡ್ಗಳಿಗೆ ಉಪಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ. ಅದರಂತೆ ಮೇ 29ರಂದು ಮತದಾನ ನಡೆಯಲಿದ್ದು, ಮೇ 31ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ.
ಬಿಬಿಎಂಪಿಯ ಸಗಾಯಪುರವಾರ್ಡ್ನ ಪಕ್ಷೇತರ ಸದಸ್ಯ ಏಳುಮಲೈ ಮತ್ತು ಕಾವೇರಿಪುರದಲ್ಲಿ ಜೆಡಿಎಸ್ನ ರಮೀಳಾ ಉಮಾಶಂಕರ್ ಸಾವಿಗೀಡಾಗಿದ್ದರು. ಆ ಹಿನ್ನೆಲೆಯಲ್ಲಿ ಎರಡೂ ವಾರ್ಡ್ಗಳಿಗೆ ಇದೀಗ ಉಪಚುನಾವಣೆ ನಡೆಯುತ್ತಿದೆ.
ಮೋದಿ, ರಾಹುಲ್ಗಿಂತ ದೇವೇಗೌಡರಿಗೆ ಪ್ರಧಾನಿ ಹುದ್ದೆ ಅವಕಾಶ ಹೆಚ್ಚು!
ರಾಜ್ಯ ಮತ್ತು ಬಿಬಿಎಂಪಿ ಆಡಳಿತದಲ್ಲಿರುವಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಬಿಬಿಎಂಪಿ ಉಪಚುನಾವಣೆಯನ್ನು ಮೈತ್ರಿ ಮೂಲಕವೇ ಎದುರಿಸುವ ಸಾಧ್ಯತೆಗಳಿವೆ. ಅದರಂತೆ ಕಾವೇರಿಪುರ ವಾರ್ಡನ್ನು ಜೆಡಿಎಸ್ಗೆ ಮತ್ತು ಸಗಾಯಪುರ ವಾರ್ಡ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾತ್ರ ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ. ಇನ್ನು, ಬಿಜೆಪಿ ಏಕಾಂಗಿ ಹೋರಾಟ ಮಾಡಲಿದೆ. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಯಿಂದ ಸ್ಪರ್ಧೆ ಮಾಡುವ ಅಭ್ಯರ್ಥಿಗಳು ಯಾರು ಎಂಬುದು ಇನ್ನು ಅಂತಿಮಗೊಂಡಿಲ್ಲ. ಆದರೆ, ಮೂರು ಪಕ್ಷದಲ್ಲಿಯೂ ಅಕಾಂಕ್ಷಿಗಳು ಟಿಕೆಟ್ಗಾಗಿ ಲಾಭಿ ಆರಂಭಿಸಿದ್ದಾರೆ.
ಬಿಜೆಪಿ ಗದ್ದುಗೆ ಗುದ್ದಾಟಕ್ಕೆ ರಂಗು:
ಒಂದು ವೇಳೆ ಬಿಜೆಪಿ ಎರಡೂ ವಾರ್ಡ್ಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ, ಪ್ರಸಕ್ತ ಸಾಲಿನ ಬಿಬಿಎಂಪಿ ಐದನೇ ಅವಧಿಯ ಮೇಯರ್ ಗದ್ದುಗೆ ಗುದ್ದಾಟ ರಂಗೇರುವ ಸಾಧ್ಯತೆಗಳಿವೆ. ಏಕೆಂದರೆ ಕಳೆದ ನಾಲ್ಕು ವರ್ಷವೂ ಮೇಯರ್ ಆಯ್ಕೆಗೆ ಸಂಖ್ಯಾಬಲದ ಲೆಕ್ಕಾಚಾರಗಳು ನಡೆದಿದ್ದವು. ಇದೀಗ ಎರಡು ವಾರ್ಡ್ಗಳು ಬಿಜೆಪಿ ತೆಕ್ಕೆಗೆ ಹೋದರೆ ಬಿಬಿಎಂಪಿ ಕೊನೆಯ ಅವಧಿಯ ಮೇಯರ್ ಚುನಾವಣೆ ಸಂದರ್ಭದಲ್ಲಿ ಮೈತ್ರಿ ಪಕ್ಷಗಳಿಗೆ 2 ಮತಗಳು ಕಡಿಮೆಯಾಗಲಿವೆ. ಹೀಗಾಗಿ ಉಪಚುನಾವಣೆ ಮೂರು ಪಕ್ಷಗಳಿಗೆ ಸಾಕಷ್ಟುಮಹತ್ವದ್ದಾಗಿದೆ.