ದಿಲ್ಲಿ ಕುಟುಂಬ ಆತ್ಮಹತ್ಯೆ ಹಿಂದೆ ಅತೃಪ್ತ ಆತ್ಮದ ಕಥೆ
ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿರುವ ದಿಲ್ಲಿಯ ಬುರಾರಿ ಕುಟುಂಬ ಆತ್ಮಹತ್ಯೆ ಪ್ರಕರಣದ ಬಗ್ಗೆ ಪೊಲೀಸರು ಇದೀಗ ಮತ್ತೊಂದು ಸ್ಫೋಟಕ ವಿಚಾರವನ್ನು ಬಯಲು ಮಾಡಿದ್ದಾರೆ.
ನವದೆಹಲಿ : ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿರುವ ದಿಲ್ಲಿಯ ಬುರಾರಿ ಕುಟುಂಬದ ಆತ್ಮಹತ್ಯೆ ಪ್ರಕರಣದ ಬಗ್ಗೆ ಪೊಲೀಸರು ಇದೀಗ ಮತ್ತೊಂದು ಸ್ಫೋಟಕ ವಿಚಾರವನ್ನು ಬಯಲು ಮಾಡಿದ್ದಾರೆ.
ಮೃತ ಕುಟುಂಬಸ್ಥರ ಡೈರಿಯಲ್ಲಿ ವಂಡರಿಂಗ್ ಸೋಲ್ ಎನ್ನುವ ವಿಚಾವೊಂದು ಕಂಡು ಬಂದಿದೆ. ಅಲ್ಲದೇ ಮುಂದಿನ ದೀಪಾವಳಿಯನ್ನು ಈ ಕುಟುಂಬ ನೋಡುವುದಿಲ್ಲ ಎನ್ನುವ ಬಗ್ಗೆಯೂ ಕೂಡ ಬರೆದಿರುವ ವಿಚಾರವನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಅಲ್ಲದೇ ಆ ಮನೆಯ ಹಿರಿಯ ವ್ಯಕ್ತಿಯಾದ ಲಲಿತ್ ಸಿಂಗ್ ಚುಂಡ್ ವತ್ ಎನ್ನುವವರ ಮೇಲೆ ಅವರ ತಂದೆಯ ಆತ್ಮ ಪ್ರವೇಶವಾಗಿ ವಿವಿಧ ವಿಚಾರಗಳನ್ನು ಕುಟುಂಬಸ್ಥರಿಗೆ ತಿಳಿಸುತಿತ್ತು ಎನ್ನುವ ಸಂಗತಿಯೂ ಕೂಡ ನಿಧಾನವಾಗಿ ಬಯಲಿಗೆ ಬಂದಿದೆ. ತಂದೆಯ ಆತ್ಮ ದೇಹ ಪ್ರವೇಶವಾದಾಗ ಅವರು ಅವರ ಮೃತ ತಂದೆಯಂತೆಯೇ ನಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ಈ ಎಲ್ಲಾ ವಿಚಾರಗಳೂ ಕೂಡ ಲಲಿತ್ ಸಿಂಗ್ ಅವರ ಡೈರಿಯಲ್ಲಿ ಪತ್ತೆಯಾಗಿದೆ.
ಕಳೆದ ವರ್ಷ 2017 ರ ನವೆಂಬರ್ 11 ರಂದು ಡೈರಿಯಲ್ಲಿ ಕುಟುಂಬದ ಒಬ್ಬರ ತಪ್ಪಿನಿಂದ ಕುಟುಂಬದ ಬೆಳವಣಿಗೆ ಸಾಧ್ಯವಾಗುತ್ತಿಲ್ಲ. ಇದೊಂದು ದೊಡ್ಡ ಸಮಸ್ಯೆಯಾಗಿದೆ ಎಂದು ಬರೆದುಕೊಂಡಿದ್ದರು ಎನ್ನಲಾಗಿದೆ. ಅಲ್ಲದೇ ಈ ಎಚ್ಚರಿಕೆಯನ್ನು ನೀವ್ಯಾರೂ ಕೂಡ ನಿರ್ಲಕ್ಷ್ಯ ಮಾಡದಿರಿ ಎಂದ ಡೈರಿಯಲ್ಲಿ ಬರೆಯಲಾಗಿತ್ತು ಎನ್ನುವುದನ್ನು ಪೊಲೀಸರು ಬಹಿರಂಗ ಮಾಡಿದ್ದಾರೆ.