ಅಧಿಕಾರಿಗಳ ವರ್ಗಾವಣೆ ದಂಧೆ ಆರೋಪ: ಕೊನೆಗೂ ಬಾಯ್ಬಿಟ್ಟ BSY ಪುತ್ರ
ಸಿಎಂ ಬಿ. ಎಸ್. ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ ಅಧಿಕಾರಿಗಳ ವರ್ಗಾವಣೆಯಲ್ಲಿ ತೊಡಗಿದ್ದಾರೆ ಎಂಬ ಆರೋಪ ಕೇಳೀಬಂದಿದೆ. ಇದಕ್ಕೆ ಸ್ವತಃ ಬಿ. ವೈ. ವಿಜಯೇಂದ್ರ ಅವರು ಪತ್ರದ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು, (ಸೆ.12) : ಯಡಿಯೂರಪ್ಪ ಅಧಿಕಾರಕ್ಕೇರುತ್ತಿದ್ದಂತೆಯೇ ರಾಜ್ಯಲ್ಲಿ ಅಧಿಕಾರಗಳ ವರ್ಗಾವಣೆ ಜೋರಾಗಿ ನಡೆದಿದೆ. ಇದರ ಹಿಂದೆ ಬಿಎಸ್ವೈ ಪುತ್ರ ಕರ್ನಾಟಕ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ. ವೈ. ವಿಜಯೇಂದ್ರ ಇದ್ದಾರೆ ಎನ್ನುವ ಚರ್ಚೆಗಳು ರಾಜ್ಯ ರಾಜಕಾರಣದಲ್ಲಿ ನಡೆದಿವೆ.
ವರ್ಗಾವಣೆ ದಂಧೆಗೆ ಸಿಎಂ ಬಿಎಸ್ವೈ ಪುತ್ರನನ್ನೇ ಬಿಟ್ಟಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದರು. ಅಷ್ಟೇ ಅಲ್ಲದೇ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರೇ ವಿಜೇಂದ್ರ ಅವರು ನಮ್ಮ ಕ್ಷೇತ್ರದಲ್ಲಿ ಅಧಿಕಾರಿಗಳ ಟ್ರಾನ್ಸ್ಫರ್ನಲ್ಲಿ ಮೂಗು ತೂರಿಸುತ್ತಿದ್ದಾರೆಂದು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.
ರಾಷ್ಟ್ರದೆಲ್ಲೆಡೆ ವ್ಯಾಪಿಸಿದ ಬಿಜೆಪಿ : BSY ಪುತ್ರ ವಿಜೇಯೇಂದ್ರ
ಇದೀಗ ಸ್ವತಃ ಬಿ. ವೈ. ವಿಜಯೇಂದ್ರ ವರ್ಗಾವಣೆ ದಂಧೆ ಆರೋಪಕ್ಕೆ ಎರಡು ಪುಟದ ಪತ್ರವನ್ನು ಬರೆದು ಸ್ಪಷ್ಟನೆ ನೀಡಿದ್ದಾರೆ. ಹಾಗಾದ್ರೆ ವಿಜಯೇಂದ್ರೆ ಏನೆಲ್ಲ ಬರೆದುಕೊಂಡಿದ್ದಾರೆ ಎನ್ನುವುದು ಈ ಕೆಳಗಿನಂತಿದೆ.
ರಾಜಕೀಯವಾಗಿ ಈಗಷ್ಟೇ ಅಂಬೆಗಾಲಿಡುತ್ತಿರುವ ನಾನು, ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರೇರಣೆಗೊಂಡು, ಪೂಜ್ಯ ತಂದೆಯವರಾದ ಶ್ರೀ ಬಿ.ಎಸ್. ಯಡಿಯೂರಪ್ಪನವರ ಹೋರಾಟದ ಬದುಕನ್ನು ಆದರ್ಶವಾಗಿಟ್ಟುಕೊಂಡು ಸಾರ್ವಜನಿಕ ಕ್ಷೇತ್ರದಲ್ಲಿ ಸಾರ್ಥಕ ಹೆಜ್ಜೆ ಇಡಬೇಕೆಂಬ ಹಂಬಲದಿಂದ ಭಾರತೀಯ ಜನತಾಪಾರ್ಟಿಯ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಗುರುತಿಸಿಕೊಂಡು ಯುವ ಸಮುದಾಯದಲ್ಲಿ ಒಂದು ಆತ್ಮ ವಿಶ್ವಾಸವನ್ನು ತುಂಬಿ ರಾಷ್ಟ್ರ ಕಟ್ಟುವ ಕಾಯಕದಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೇನೆ" ಎಂದು ಬಿ. ವೈ. ವಿಜಯೇಂದ್ರ ಹೇಳಿದ್ದಾರೆ.