ಸಿದ್ದರಾಮಯ್ಯ, ಬಿಎಸ್ ವೈಗೆ ವಿಶ್ರಾಂತಿ!
ಚುನಾವಣೆಯಲ್ಲಿ ಬಂದ ಫಲಿತಾಂಶ ಯಾರಿಗಾದರೂ ಹೆಚ್ಚು ನೋವು ತಂದಿದ್ದರೆ ಅದು ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಅವರಿಗೆ. ಸಿದ್ದರಾಮಯ್ಯ ಅಂತೂ ದಿಲ್ಲಿಗೆ ಬಂದರೂ ಪಂಚತಾರಾ ಹೋಟೆಲ್ ಶಾಂಘ್ರಿಲಾದಲ್ಲಿ ಇಳಿದುಕೊಂಡಿದ್ದರೇ ಹೊರತು, ಕರ್ನಾಟಕ ಭವನದ ಕಾರು ತೆಗೆದುಕೊಳ್ಳಲಿಲ್ಲ. ರೂಮ್ ಕೂಡ ಬೇಡ ಎಂದರಂತೆ.
ಬೆಂಗಳೂರು (ಜೂ. 05): ಚುನಾವಣೆಯಲ್ಲಿ ಬಂದ ಫಲಿತಾಂಶ ಯಾರಿಗಾದರೂ ಹೆಚ್ಚು ನೋವು ತಂದಿದ್ದರೆ ಅದು ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಅವರಿಗೆ. ಸಿದ್ದರಾಮಯ್ಯ ಅಂತೂ ದಿಲ್ಲಿಗೆ ಬಂದರೂ ಪಂಚತಾರಾ ಹೋಟೆಲ್ ಶಾಂಘ್ರಿಲಾದಲ್ಲಿ ಇಳಿದುಕೊಂಡಿದ್ದರೇ ಹೊರತು, ಕರ್ನಾಟಕ ಭವನದ ಕಾರು ತೆಗೆದುಕೊಳ್ಳಲಿಲ್ಲ. ರೂಮ್ ಕೂಡ ಬೇಡ ಎಂದರಂತೆ.
ರಾಹುಲ್ ನಿವಾಸದಿಂದ ಹೊರಗಡೆ ಬಂದಾಗ ಅತೀವ ಬೇಸರದಲ್ಲಿಯೇ ಇದ್ದ ಸಿದ್ದರಾಮಯ್ಯ, ಯಾವಾಗಲೂ ಪತ್ರಕರ್ತರನ್ನು ಮಾತನಾಡಿಸುವಂತೆ ‘ಏನಯ್ಯ ಚೆನ್ನಾಗಿದ್ದೀಯಾ’ ಎಂದೂ ಅನ್ನಲಿಲ್ಲ. ‘ಭವನಕ್ಕೆ ಬನ್ರೀ ಮಾತಾಡೋಣ’ ಎಂದೂ ಹೇಳದೆ ಮುಗುಮ್ಮಾಗಿ ಇದ್ದರು. ಹಟ ಬಿಡದ ಪತ್ರಕರ್ತನೊಬ್ಬ ನ್ಯಾಷನಲ್ ಪೊಲಿಟಿಕ್ಸ್ಗೆ ಬರುತ್ತೀರಾ ಎಂದಾಗ, ‘ಅಯ್ಯೋ ಬಿಡಪ್ಪ, ಇಷ್ಟೆಲ್ಲಾ ಕೆಲಸ ಮಾಡಿದ ಮೇಲೆ ಸೋಲೋದಾದರೆ ಯಾಕೆ ಚುನಾವಣೆ’ ಎಂದು ನೋವಿನಿಂದ ಹೇಳಿ ಕಾರ್ ಡ್ರೈವರ್ಗೆ ಚಲೋಜಿ ಎಂದರು.
ಇನ್ನು ಯಡಿಯೂರಪ್ಪ ಕೂಡ ದಿಲ್ಲಿಗೆ ಬಂದಾಗ ದಿಲ್ಲಿ ಪತ್ರಕರ್ತರು ಎಷ್ಟೇ ಹೇಳಿದರೂ ಮನೆ ಒಳಕ್ಕೆ ಬರಮಾಡಿಕೊಳ್ಳಲಿಲ್ಲ. ಚುನಾವಣೆಗೆ ಒಂದು ತಿಂಗಳ ಮುಂಚೆ ಬಂದಾಗ ದಿಲ್ಲಿ ಮನೆ ತುಂಬಾ ಲಕ್ಕಿ ಇದೆ ಅಣ್ಣ. ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳುತ್ತಿದ್ದ ಯಡಿಯೂರಪ್ಪ, ಈ ಬಾರಿ ದಿಲ್ಲಿಗೆ ಬಂದವರೇ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ, ಲಕ್ಕಿ ಎಂದು ಹೇಳುತ್ತಿದ್ದ ಮನೆ ಖಾಲಿ ಮಾಡಲು ಸಿಬ್ಬಂದಿಗೆ ಹೇಳಿ ಹೋದರು. ದಣಿದಿರುವ ಇಬ್ಬರಿಗೂ ಸ್ವಲ್ಪ ದಿನ ವಿಶ್ರಾಂತಿ ಬೇಕೆನಿಸುತ್ತದೆ.
-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ವಿಶೇಷ ಪ್ರತಿನಿಧಿ