ಗೌಡರ ಭೇಟಿಯಾದ ಜೆಡಿಎಸ್ ತೊರೆದ ಶಿಷ್ಯ
ಜೆಡಿಎಸ್ ತೊರೆದು ಬೇರೆ ಪಕ್ಷ ಸೇರ್ಪಡೆಯಾದ ಮುಖಂಡ ಇದೀಗ ಎಚ್ ಡಿ ದೇವೇಗೌಡರನ್ನು ಭೇಟಿಯಾಗಿದ್ದಾರೆ.
ಬೆಂಗಳೂರು : ಲೋಕಸಭಾ ಚುನಾವಣೆಗಾಗಿ ಜೆಡಿಎಸ್ ತೊರೆದು ಬಿಎಸ್ಪಿಯಿಂದ ಕಣಕ್ಕಿಳಿದು ಜಯಗಳಿಸಿರುವ ಡ್ಯಾನಿಶ್ ಅಲಿ ಅವರು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು.
ಮಂಗಳವಾರ ಪದ್ಮನಾಭನಗರದ ದೇವೇಗೌಡರ ನಿವಾಸಕ್ಕೆ ಆಗಮಿಸಿ ಕೆಲ ಸಮಯ ರಾಜ್ಯ ರಾಜಕೀಯ ಬೆಳವಣಿಗೆ ಕುರಿತು ಸಮಾಲೋಚನೆ ನಡೆಸಿದರು. ಸರ್ಕಾರವನ್ನು ಅಭದ್ರಗೊಳಿಸಲು ಬಿಜೆಪಿ ನಡೆಸುವ ಪ್ರಯತ್ನಗಳು ಮತ್ತು ಕಾಂಗ್ರೆಸ್ನ ನಡೆಯ ಬಗ್ಗೆ ಮಾತುಕತೆ ನಡೆಸಿದರು ಎಂದು ಹೇಳಲಾಗಿದೆ.
ದೇವೇಗೌಡರ ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ನನ್ನ ರಾಜಕೀಯ ಗುರುಗಳ ಆಶೀರ್ವಾದ ಪಡೆಯಲು ಆಗಮಿಸಿದ್ದೆ. ನನ್ನ ಮತ್ತು ಅವರ ಕುಟುಂಬದ ಸಂಬಂಧ ದಶಕಗಳ ಕಾಲದ್ದಾಗಿದೆ. ನಾನು ಬೇರೆ ಪಕ್ಷಕ್ಕೆ ಹೋಗಿದ್ದರೂ ಸಹ ಅವರ ಮತ್ತು ನನ್ನ ಸಂಬಂಧ ಮೊದಲಿನಂತೆಯೇ ಇರುತ್ತದೆ. ರಾಜಕೀಯ ವಿಷಯಗಳ ಕುರಿತು ಚರ್ಚಿಸಲಾಗಿದೆ. ಬಿಎಸ್ಪಿ ಶಾಸಕ ಎನ್.ಮಹೇಶ್ ಬಿಜೆಪಿಗೆ ಸೇರಲಿದ್ದಾರೆ ಎಂಬುದು ಊಹಾಪೋಹ ಎಂದು ಸ್ಪಷ್ಟಪಡಿಸಿದರು.