ಅಸಮರ್ಥರ ತಲೆದಂಡ ಮಾಡಿ: ಮೋದಿಗೆ ಬಿಎಸ್ಸೆನ್ನೆಲ್‌ ಮನವಿ| ತುರ್ತು ಹಣಕಾಸು ನೆರವಿಗೆ ಸಿಬ್ಬಂದಿಗಳ ಮನವಿ

ನವದೆಹಲಿ[ಜೂ.24]: ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ಗೆ ಅಗತ್ಯವಿರುವ ಹಣಕಾಸಿನ ನೆರವು ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಎಸ್‌ಎನ್‌ಎಲ್‌ನ ಅಖಿಲ ಭಾರತ ಎಂಜಿನಿಯರಿಂಗ್‌ ಪದವೀದರರು ಮತ್ತು ಟೆಲಿಕಾಂ ಅಧಿಕಾರಿಗಳ ಸಂಘಟನೆ ಮನವಿ ಮಾಡಿದೆ. ಅಲ್ಲದೆ ಕಂಪನಿಯನ್ನು ಈ ಸ್ಥಿತಿಗೆ ತಂದ್ದಿದ್ದಕ್ಕೆ ಅಸಮರ್ಥ ಅಧಿಕಾರಿಗಳನ್ನು ಹೊಣೆ ಮಾಡಿ ಎಂದೂ ಕೋರಿಕೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸರ್ಕಾರಿ ಮತ್ತು ಖಾಸಗಿ ವಲಯದ ಇತರೆ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದರೆ ಬಿಎಸ್‌ಎನ್‌ಎಲ್‌ ಶೂನ್ಯ ಸಾಲ ಹೊಂದಿದೆ. ಜೊತೆಗೆ ದಿನೇ ದಿನೇ ಮಾರುಕಟ್ಟೆಯಲ್ಲಿ ತನ್ನ ಪಾಲು ಏರಿಸಿಕೊಳ್ಳುತ್ತಿದೆ. ಆದರೆ ವಿವಿಧ ಕಾರಣಗಳಿಂದಾಗಿ ಸದ್ಯಕ್ಕೆ ಕಂಪನಿ ಭಾರೀ ಹಣಕಾಸಿನ ಸಂಕಷ್ಟಎದುರಿಸುತ್ತಿದೆ. ಇದು ಕಂಪನಿಯ ಸೇವೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಹೀಗಾಗಿ ತಾವು ಬಜೆಟ್‌ನಲ್ಲಿ ಬಿಎಸ್‌ಎನ್‌ಎಲ್‌ಗೆ ಅಗತ್ಯವಾದ ತುರ್ತು ಹಣಕಾಸಿನ ನೆರವನ್ನು ಒದಗಿಸಬೇಕು. ಕಂಪನಿಯನ್ನು ಉತ್ತಮ ಹಾದಿಗೆ ಕೊಂಡೊಯ್ದ ಅಧಿಕಾರಿಗಳನ್ನು ಪ್ರೋತ್ಸಾಹಿಸುವ ಜೊತೆಗೆ, ಅಸಮರ್ಥ ಅಧಿಕಾರಿಗಳನ್ನು ಸಂಕಷ್ಟಕ್ಕೆ ಹೊಣೆಮಾಡಬೇಕು ಎಂದು ಸಂಘಟನೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ಕೋರಿದೆ.

ಸದ್ಯ ದೇಶದ 22 ಟೆಲಿಕಾಂ ವಲಯಗಳ ಪೈಕಿ 20ರಲ್ಲಿ ಬಿಎಸ್‌ಎನ್‌ಎಲ್‌ ಸೇವೆ ಸಲ್ಲಿಸುತ್ತಿದ್ದರೆ, ದೆಹಲಿ ಮತ್ತು ಮುಂಬೈನಲ್ಲಿ ಸರ್ಕಾರ ಸ್ವಾಮ್ಯದ ಎಂಟಿಎನ್‌ಎಲ್‌ ಸೇವೆ ನೀಡುತ್ತಿದೆ. ಎಂಟಿಎನ್‌ಎಲ್‌ ಹಲವು ವರ್ಷಗಳಿಂದ ಸತತ ನಷ್ಟದಲ್ಲಿದೆ.