ಬಿಜೆಪಿ ಬಿಡಲಿದ್ದಾರೆ ಬಿಎಸ್‌ವೈ: ಇಬ್ರಾಹಿಂ| ಲೋಕಸಭೆ ಫಲಿತಾಂಶ ಬಂದ ನಂತರ ಬಿಜೆಪಿಯಲ್ಲಿ ಬದಲಾವಣೆ

ಬೆಂಗಳೂರು[ಮೇ.15]: ಲೋಕಸಭಾ ಚುನಾವಣೆ ಫಲಿತಾಂಶ ಬಂದ ನಂತರ ರಾಜ್ಯ ಬಿಜೆಪಿಯಲ್ಲಿ ಬದಲಾವಣೆ ಆಗಲಿದ್ದು, ಯಡಿಯೂರಪ್ಪ ಅವರು ಪಕ್ಷದಿಂದ ಹೊರಬರಲಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ, ಪರಿಷತ್‌ ಸದಸ್ಯ ಸಿ.ಎಂ. ಇಬ್ರಾಹಿಂ ಭವಿಷ್ಯ ನುಡಿದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿಯಲ್ಲಿನ ಒಂದು ಬಣ ಯಡಿಯೂರಪ್ಪ ಅವರ ವಿರುದ್ಧ ಕೆಲಸ ಮಾಡುತ್ತಿದೆ. ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಹೊರಟಿದೆ. ಆದರೆ ಯಡಿಯೂರಪ್ಪ ಅವರು ಇಲ್ಲ ಎಂದರೆ ಶೇ.60ರಷ್ಟುಬಿಜೆಪಿ ಇಲ್ಲ ಎಂದರ್ಥ. ಬಿಜೆಪಿ ನಿಂತಿರುವುದೇ ಯಡಿಯೂರಪ್ಪ ಅವರ ಶಕ್ತಿ ಮೇಲೆ. ಆದರೆ ವೀರಶೈವ-ಲಿಂಗಾಯತರಿಗೆ ಬಿಜೆಪಿ ಅನ್ಯಾಯ ಮಾಡಿದೆ. ಎಂಟು ಸಂಸದರಿದ್ದರೂ ಒಬ್ಬರನ್ನೂ ಕೇಂದ್ರ ಸಚಿವರನ್ನಾಗಿ ಮಾಡಿಲ್ಲ. ಹಾಗಾಗಿ ರಾಜ್ಯದಲ್ಲಿ ಬಿಜೆಪಿಗೆ ಭವಿಷ್ಯ ಇಲ್ಲ ಎಂದು ಹೇಳಿದರು.

ಯಡಿಯೂರಪ್ಪ ಅವರು ಒಳ್ಳೆಯವರೇ. ಅವರು ನಮ್ಮ ಜಿಲ್ಲೆಯವರು, ಆದರೆ ಅವರು ನಿಂತ ಜಾಗ ಸರಿಯಿಲ್ಲ. ಜಾಗ ಅಂದರೆ ಪಕ್ಷ ಸರಿಯಿಲ್ಲ. ಹಾಗಾಗಿ ಅವರು ಆ ಪಕ್ಷ ಬಿಟ್ಟು ಹೊರಬರಬೇಕು ಎಂಬುದು ನಮ್ಮ ವೈಯಕ್ತಿಕ ಅಭಿಪ್ರಾಯ. ಆದರೆ ಯಡಿಯೂರಪ್ಪ ಹಟವಾದಿ, ಅಧಿಕಾರ ಪಡದೇ ಪಡೆಯುತ್ತೇನೆ ಎಂದು ಹೇಳುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಯಾವತ್ತೂ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎಂದು ಇಬ್ರಾಹಿಂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.