ಶುಕ್ರವಾರ ಸ್ನೇಹತ ಮನೋಜ್‌ ಜತೆಗೆ ಹರ್ಷಲ್‌ ಬಹಿರ್ದೆಸೆಗೆಂದು ಮನೆ ಸಮೀಪದ ಜಮೀನಿಗೆ ತೆರಳಿದ್ದ. ಈ ವೇಳೆ ರಾಸಾಯನಿಕ ವಸ್ತು ಸುರಿದಿದ್ದ ಜಾಗದಲ್ಲಿ ಕಾಲಿಟ್ಟಾಗ ಇದ್ದಕ್ಕಿದ್ದಂತೆ ಭೂಮಿಯಲ್ಲಿ ಬೆಂಕಿ ಹೊತ್ತಿಕೊಂಡು ಹರ್ಷಿಲ್‌ ಗಂಭೀರ ಗಾಯಗೊಂಡಿದ್ದಾನೆ. ಈ ವೇಳೆ ಪಕ್ಕದಲ್ಲೇ ಇದ್ದ ಮನೋಜ್‌ ಹರ್ಷಿಲ್‌ ನೆರವಿಗೆ ಧಾವಿಸಿದಾಗ ಆತನಿಗೂ ಸುಟ್ಟಗಾಯಗಳಾಗಿವೆ.

ಮೈಸೂರು(ಏ.17): ನಗರದ ಹೊರವಲಯದ ಶಾದನಹಳ್ಳಿ​ಯಲ್ಲಿ ಭೂಮಿ ಉಗುಳುತ್ತಿರುವ ಬೆಂಕಿಯಿಂದ ಗಂಭೀರ​ವಾಗಿ ಗಾಯ​ಗೊಂಡಿದ್ದ ಹದಿ​ನಾಲ್ಕು ವರ್ಷದ ಬಾಲ​ಕನೊಬ್ಬ ಮೃತಪಟ್ಟವಿಚಿತ್ರ ಘಟನೆ ಭಾನುವಾರ ವರದಿಯಾಗಿದೆ.

ಘಟನೆಯಲ್ಲಿ ಮನೋಜ್‌ ಎಂಬಾತ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮೈಸೂರಿನ ಶಾದನಹಳ್ಳಿಯ ಮೂರ್ತಿ, ಜಾನಕಿ ದಂಪತಿ ಪುತ್ರ ಹರ್ಷಲ ಮೃತ ಬಾಲಕ.

ಶುಕ್ರವಾರ ಸ್ನೇಹತ ಮನೋಜ್‌ ಜತೆಗೆ ಹರ್ಷಲ್‌ ಬಹಿರ್ದೆಸೆಗೆಂದು ಮನೆ ಸಮೀಪದ ಜಮೀನಿಗೆ ತೆರಳಿದ್ದ. ಈ ವೇಳೆ ರಾಸಾಯನಿಕ ವಸ್ತು ಸುರಿದಿದ್ದ ಜಾಗದಲ್ಲಿ ಕಾಲಿಟ್ಟಾಗ ಇದ್ದಕ್ಕಿದ್ದಂತೆ ಭೂಮಿಯಲ್ಲಿ ಬೆಂಕಿ ಹೊತ್ತಿಕೊಂಡು ಹರ್ಷಿಲ್‌ ಗಂಭೀರ ಗಾಯಗೊಂಡಿದ್ದಾನೆ. ಈ ವೇಳೆ ಪಕ್ಕದಲ್ಲೇ ಇದ್ದ ಮನೋಜ್‌ ಹರ್ಷಿಲ್‌ ನೆರವಿಗೆ ಧಾವಿಸಿದಾಗ ಆತನಿಗೂ ಸುಟ್ಟಗಾಯಗಳಾಗಿವೆ. ಇಷ್ಟಾದರೂ ಮನೋಜ್‌ ಗಂಭೀರ ಗಾಯಗೊಂಡಿದ್ದ ಹರ್ಷಿಲ್‌ನನ್ನು ಸ್ವಲ್ಪ ದೂರದವರೆಗೆ ಕರೆತಂದು ಕುಸಿದು ಬಿದ್ದಿದ್ದಾನೆ. ಬಾಲಕರನ್ನು ಈ ಸ್ಥಿತಿಯಲ್ಲಿ ನೋಡಿದ ಸ್ಥಳೀಯರು ತಕ್ಷಣ ಇಬ್ಬರನ್ನೂ ಮೈಸೂರಿನ ಕೆ.ಆರ್‌. ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಹರ್ಷಿಲ್‌ ಭಾನು​ವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಮನೋಜ್‌ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ.
ಸ್ಥಳೀಯರಲ್ಲಿ ಆತಂಕ

ಈ ಘಟನೆ ಕುಂಬಾರಕೊಪ್ಪಲು ನಿವಾಸಿ ಸೋಮಣ್ಣ ಎಂಬುವರಿಗೆ ಸೇರಿದ ನಾಲ್ಕು ಎಕರೆ ಜಮೀನಿನಲ್ಲಿ ಸಂಭವಿಸಿದೆ. ಘಟನಾ ಸ್ಥಳಕ್ಕೆ ಮೇಟಗಳ್ಳಿ ಪೊಲೀಸ್‌ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿ​ಶೀ​ಲನೆ ನಡೆಸಿದರು.

ಶನಿವಾರ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ನೀರು ಹಾಯಿಸಿದರಾದ ರೂ ಸಮಸ್ಯೆ ಇನ್ನಷ್ಟುಬಿಗಡಾಯಿಸುವ ಆತಂಕದಿಂದ ಆ ಕೆಲಸ ಅರ್ಧದಲ್ಲೇ ನಿಲ್ಲಿಸಿದರು. ಸೋಮಣ್ಣ ಅವರ ಜಮೀನಿನ ಪಕ್ಕದ ಕಾರ್ಖಾನೆ ಗಳ ರಾಸಾಯನಿಕ ತ್ಯಾಜ್ಯ ಗಳನ್ನು ತಂದು ಸುರಿದಿರುವ ಕಾರಣ ಈ ರೀತಿ ಭೂಮಿಯಲ್ಲಿ ಬೆಂಕಿ ಕಾಣಿಸಿ ಕೊಳ್ಳುತ್ತಿದೆ ಎನ್ನಲಾಗಿದೆ.
ಆನೇಕಲ್‌ನಲ್ಲೂ ಆಗಿತ್ತು

ಕಸವನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡಿದ ಹಿನ್ನೆಲೆಯಲ್ಲಿ ಬೆಂಗಳೂರು ಸಮೀಪದ ಆನೇಕಲ್‌ನ ಲಕ್ಷ್ಮೀ ಪುರದಲ್ಲೂ ಇದೇ ರೀತಿಯ ಘಟನೆ ವರ್ಷದ ಹಿಂದೆ ಬೆಳಕಿಗೆ ಬಂದಿತ್ತು. ಕಸದಿಂದಾಗಿ ಭೂಮಿಯಡಿ ಮಿಥೇನ್‌ ಅನಿಲ ಉತ್ಪತ್ತಿಯಾಗಿ ಬೆಂಕಿಕಡ್ಡಿ ಗೀರಿದರೆ ನೆಲದಲ್ಲಿ ಬೆಂಕಿ ಕಾಣಿಸಿಕೊಳ್ಳುವ ಮೂಲಕ ಸ್ಥಳೀಯ ನಿವಾಸಿಗಳನ್ನು ತೀವ್ರ ಆತಂಕಕ್ಕೆ ದೂಡಿತ್ತು.

(ಕನ್ನಡಪ್ರಭ ವಾರ್ತೆ)