ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹಂತಕರನ್ನು ಪತ್ತೆ ಹಚ್ಚಿದ ಕರ್ನಾಟಕ ಪೊಲೀಸರ ಕಾರ್ಯ ವೈಖರಿಯನ್ನು ಉಲ್ಲೇಖಿಸಿ, ವಿಚಾರವಾದಿ ನರೇಂದ್ರ ದಾಭೋಲ್ಕರ್ ಮತ್ತು ಗೋವಿಂದ ಪನ್ಸಾರೆ ಹಂತಕರನ್ನು ಪತ್ತೆ ಹಚ್ಚದ ಮಹಾರಾಷ್ಟ್ರ ಪೊಲೀಸರಿಗೆ ಬಾಂಬೇ ಹೈ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಮುಂಬೈ: ಸಿಬಿಐ ಹಾಗೂ ಮಹಾರಾಷ್ಟ್ರ ಸಿಐಡಿಗೆ ಚಾಟಿ ಬೀಸಿರುವ ಬಾಂಬೆ ಹೈಕೋರ್ಟ್, ಕರ್ನಾಟಕ ಪೊಲೀಸರಿಗೆ ಶಹಬ್ಬಾಸ್ ಹೇಳಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದುವರೆಗೂ ವಿಚಾರವಾದಿ ನರೇಂದ್ರ ದಾಭೋಲ್ಕರ್ ಮತ್ತು ಗೋವಿಂದ ಪನ್ಸಾರೆ ಹಂತಕರನ್ನು ಪತ್ತೆ ಹಚ್ಚದಿದ್ದಕ್ಕೆ ಬಾಂಬೆ ಹೈಕೋರ್ಟ್ ಸಿಬಿಐ ಹಾಗೂ ಮಹಾರಾಷ್ಟ್ರ ಪೊಲೀಸರಿಗೆ ತರಾಟೆಗೆತೆಗೆದುಕೊಂಡಿದ್ದು, ಕರ್ನಾಟಕ ಪೊಲೀಸರನ್ನು ನೋಡಿ ಕಲಿಯಿರಿ ಎಂದು ಚಾಟಿ ಬೀಸಿದೆ. 


ಮಹಾರಾಷ್ಟ್ರ ಪೊಲೀಸರು ಕರ್ನಾಟಕ ಪೊಲೀಸರಷ್ಟು ಚುರುಕಿಲ್ಲ, ಮಹಾರಾಷ್ಟ್ರ ಪೊಲೀಸರಿಗೆ ಗಂಭೀರತೆ ಇಲ್ಲ ಎಂದು ಬಾಂಬೆ ಹೈಕೋರ್ಟ್ ನ ನ್ಯಾಯಾಮೂರ್ತಿ ಎಸ್.ಸಿ. ಧರ್ಮಾಧಿಕಾರಿ ಅಭಿಪ್ರಾಯಪಟ್ಟಿದ್ದಾರೆ. ‘ತೀವ್ರಗಾಮಿಗಳ ಮೇಲೆ ಕಣ್ಣಿಟ್ಟಿದ್ದೀವಿ ಎಂದು ಹೇಳ್ತೀರಿ ’ಆದ್ರೆ ಕರ್ನಾಟಕ ಪೊಲೀಸರು ಇಲ್ಲಿಗೆ ಬಂದು ಹಂತಕರನ್ನು ಅರೆಸ್ಟ್ ಮಾಡಿದ್ದೇಗೆ? ಎಂದು ಸಿಬಿಐ ಹಾಗೂ ಮಹಾರಾಷ್ಟ್ರ ಸಿಐಡಿಗೆ ಬಾಂಬೆ ಕೋರ್ಟ್ ಜಡ್ಜ್ ಪ್ರಶ್ನಿಸಿದ್ದಾರೆ.


2017 ಸೆಪ್ಟಂಬರ್ 5ರಂದು ದುಷ್ಕರ್ಮಿಗಳು ಪತ್ರಕರ್ತೆ ಗೌರಿ ಲಂಕೇಶ್ ರನ್ನು ಅವರ ನಿವಾಸದಲ್ಲಿ ಗುಂಡಿಕ್ಕಿ ಹತ್ಯೆಗೈದಿದ್ದರು. ಈ ಪ್ರಕರಣದಲ್ಲಿ ಕರ್ನಾಟಕ ಪೊಲೀಸರು ಈಗಾಗಲೇ 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರವಾದಿ ನರೇಂದ್ರ ದಾಬೋಲ್ಕರ್ 20 ಆಗಸ್ಟ್ 2013 ರಂದು ಹತ್ಯೆಯಾಗಿದ್ದರೆ, ಇನ್ನೋರ್ವ ವಿಚಾರವಾದಿ ಗೋವಿಂದ ಪನ್ಸಾರೆ 20 ಫೆಬ್ರವರಿ 2015ರಂದು ಹತ್ಯೆಯಾಗಿದ್ದಾರೆ. ಆದರೆ ಈವರೆಗೂ ಮಹಾರಾಷ್ಟ್ರದ ಪೊಲೀಸರು ಮತ್ತು ಸಿಬಿಐ ಹಂತಕರನ್ನು ಬಂಧಿಸುವಲ್ಲಿ ವಿಫಲವಾಗಿದೆ.