ನಗರದಲ್ಲಿ 6 ತಿಂಗಳಿನಲ್ಲಿ ಎಲೆಕ್ಟ್ರಿಕ್ ಬಸ್ ಸಂಚಾರ.!
ಬಿಎಂಟಿಸಿಯು ಕೇಂದ್ರ ಸರ್ಕಾರದ ‘ಫೇಮ್ ಯೋಜನೆ’ಯ ಅನುದಾನ ಬಳಸಿಕೊಂಡು ಗುತ್ತಿಗೆ ಆಧಾರದಡಿ 150 ಎಲೆಕ್ಟ್ರಿಕ್ ಬಸ್ ಪಡೆಯಲು ನಿರ್ಧರಿಸಿ, ಆಹ್ವಾನಿಸಿದ್ದ ಟೆಂಡರ್ನಲ್ಲಿ ಟಾಟಾ ಮಹೀಂದ್ರ, ರಿಚೆಟ್ ಪ್ರೊಜೆಕ್ಟ್, ಅಶೋಕಾ ಲೇಲ್ಯಾಂಡ್ ಸೇರಿದಂತೆ ಏಳು ಕಂಪನಿಗಳು ಭಾಗವಹಿಸಿದ್ದವು. ಇದರಲ್ಲಿ ಗೋಲ್ಡ್ ಸ್ಟೋನ್ ಕಂಪನಿ ಅತಿಕಡಿಮೆ ದರದಲ್ಲಿ 10 ವರ್ಷಗಳ ಅವಧಿಗೆ ಎಲೆಕ್ಟ್ರಿಕ್ ಬಸ್ ಗುತ್ತಿಗೆ ನೀಡಲು ಮುಂದಿದೆ ಬಂದಿದೆ. ಎಲ್ಲ ಪ್ರಕ್ರಿಯೆ ಸುಗಮವಾಗಿ ನಡೆದರೆ ಮುಂದಿನ ಆರು ತಿಂಗಳಲ್ಲಿ ಎಲೆಕ್ಟ್ರಿಕ್ ಬಸ್'ಗಳು ನಗರದ ರಸ್ತೆಗಿಳಿಯಲಿವೆ.
ಬೆಂಗಳೂರು(ಮಾ.01): ಕೊನೆಗೂ ರಾಜಧಾನಿ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬಸ್ ಸಂಚಾರಕ್ಕೆ ಕಾಲ ಕೂಡಿದೆ. ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಗುತ್ತಿಗೆ ಆಧಾರದಡಿ ಬಸ್ ಪಡೆಯಲು ಆಹ್ವಾನಿಸಿದ್ದ ಜಾಗತಿಕ ಟೆಂಡರ್'ನಲ್ಲಿ ಪಾಲ್ಗೊಂಡಿದ್ದ ಏಳು ಕಂಪನಿಗಳ ಪೈಕಿ ಅಂತಿಮವಾಗಿ ಹೈದರಾಬಾದ್ ಮೂಲದ ಗೋಲ್ಡ್'ಸ್ಟೋನ್ ಕಂಪನಿ ಗುತ್ತಿಗೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ಬಿಎಂಟಿಸಿಯು ಕೇಂದ್ರ ಸರ್ಕಾರದ ‘ಫೇಮ್ ಯೋಜನೆ’ಯ ಅನುದಾನ ಬಳಸಿಕೊಂಡು ಗುತ್ತಿಗೆ ಆಧಾರದಡಿ 150 ಎಲೆಕ್ಟ್ರಿಕ್ ಬಸ್ ಪಡೆಯಲು ನಿರ್ಧರಿಸಿ, ಆಹ್ವಾನಿಸಿದ್ದ ಟೆಂಡರ್ನಲ್ಲಿ ಟಾಟಾ ಮಹೀಂದ್ರ, ರಿಚೆಟ್ ಪ್ರೊಜೆಕ್ಟ್, ಅಶೋಕಾ ಲೇಲ್ಯಾಂಡ್ ಸೇರಿದಂತೆ ಏಳು ಕಂಪನಿಗಳು ಭಾಗವಹಿಸಿದ್ದವು. ಇದರಲ್ಲಿ ಗೋಲ್ಡ್ ಸ್ಟೋನ್ ಕಂಪನಿ ಅತಿಕಡಿಮೆ ದರದಲ್ಲಿ 10 ವರ್ಷಗಳ ಅವಧಿಗೆ ಎಲೆಕ್ಟ್ರಿಕ್ ಬಸ್ ಗುತ್ತಿಗೆ ನೀಡಲು ಮುಂದಿದೆ ಬಂದಿದೆ. ಎಲ್ಲ ಪ್ರಕ್ರಿಯೆ ಸುಗಮವಾಗಿ ನಡೆದರೆ ಮುಂದಿನ ಆರು ತಿಂಗಳಲ್ಲಿ ಎಲೆಕ್ಟ್ರಿಕ್ ಬಸ್'ಗಳು ನಗರದ ರಸ್ತೆಗಿಳಿಯಲಿವೆ.
ಕೇಂದ್ರ ಸರ್ಕಾರ 150 ಎಲೆಕ್ಟ್ರಿಕ್ ಬಸ್ಗಳಿಗೆ ಅನುದಾನ ನೀಡಲು ಒಪ್ಪಿಗೆ ಸೂಚಿಸಿದೆ. ಆದರೆ, ಮೊದಲ ಹಂತದಲ್ಲಿ 40 ಎಲೆಕ್ಟ್ರಿಕ್ ಬಸ್ಗಳಿಗೆ ಮಾತ್ರ ಅನುದಾನ ನೀಡುವುದಾಗಿ ಸ್ಪಷ್ಟಪಡಿಸಿದೆ. ಅದರಂತೆ ಬಿಎಂಟಿಸಿಯು ಮೊದಲಿಗೆ 40 ಬಸ್'ಗಳನ್ನು ಗುತ್ತಿಗೆ ಆಧಾರದಡಿ ಪಡೆಯಲು ನಿರ್ಧರಿಸಿದೆ ಎಂದು ನಿಗಮದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಗೋಲ್ಡ್'ಸ್ಟೋನ್ ಕಂಪನಿಯು 12 ಮೀಟರ್ ಉದ್ದದ 41 ಆಸನ ಸಾಮರ್ಥ್ಯದ ಬಸ್ ಗುತ್ತಿಗೆ ನೀಡಲಿದೆ. ಇದಕ್ಕೆ ಪ್ರತಿ ಕಿ.ಮೀ.ಗೆ 37.5 ರು. ಪಡೆಯಲಿದೆ. ಬಿಎಂಟಿಸಿ ವಿದ್ಯುತ್ ಮತ್ತು ನಿರ್ವಾಹಕನ ವೆಚ್ಚ ಮಾತ್ರ ಭರಿಸಬೇಕು. ಕಂಪನಿಗೆ ನೀಡುವ ಮೊತ್ತ ಹಾಗೂ ವಿದ್ಯುತ್ ಹಾಗೂ ನಿರ್ವಾಹಕನ ವೆಚ್ಚ ಸೇರಿ ಬಿಎಂಟಿಸಿಗೆ ಪ್ರತಿ ಕಿ.ಮೀ.ಗೆ 55ರಿಂದ 58 ರು. ವೆಚ್ಚವಾಗಲಿದೆ. ಫೇಮ್ ಯೋಜನೆಯಡಿ ಒಂದು ಬಸ್'ಗೆ ಸುಮಾರು 1 ಕೋಟಿ ರು. ಅನುದಾನ ಸಿಗುವುದರಿಂದ ಬಿಎಂಟಿಸಿಗೆ ಆರ್ಥಿಕ ಹೊರೆ ಕಡಿಮೆಯಾಗಲಿದೆ. ಕೇಂದ್ರ ಸರ್ಕಾರ ಮೊದಲ ಹಂತದಲ್ಲಿ ನೀಡುವ 40 ಕೋಟಿ ರು. ಹಣದಲ್ಲಿ ಕಂಪನಿಗೆ ಬಾಡಿಗೆ ಪಾವತಿಸಲಿದೆ. ಇದರ ಜೊತೆಗೆ ಎಲೆಕ್ಟ್ರಿಕ್ ಬಸ್'ಗಳಿಗೆ ಸಬ್ಸಿಡಿ ದರದಲ್ಲಿ ವಿದ್ಯುತ್ ಪೂರೈಸುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ ಎಂದು ಹೇಳಿದರು.