ಸಾರಿಗೆ ಸಚಿವರಿಗೆ ಸಿಗುತ್ತಾ ಗೇಟ್ ಪಾಸ್ ..?
ಸಾರಿಗೆ ಸಚಿವರನ್ನು ಹುದ್ದೆಯಿಂದ ಕೈ ಬಿಡಲು ಆಗ್ರಹ ಕೇಳಿ ಬಂದಿದೆ. ಸಾರಿಗೆ ಸಚಿವರ ವಿರುದ್ಧ ಮಹಿಳೆಯೋರ್ವರು ದೌರ್ಜನ್ಯದ ಆರೋಪ ಮಾಡಿದ್ದು, ಈ ನಿಟ್ಟಿನಲ್ಲಿ ದಿಲ್ಲಿ ಸಚಿವ ಕೈಲಾಶ್ ಗೆಹ್ಲೋಟ್ ಕೈ ಬಿಡಲು ಆಗ್ರಹಿಸಲಾಗಿದೆ.
ನವದೆಹಲಿ : ದಿಲ್ಲಿ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ವಿರುದ್ಧ ಅತ್ಯಾಚಾರ ಆರೋಪ ಎದುರಾಗಿದ್ದು, ಸಚಿವ ಸ್ಥಾನ ತೊರೆಯಬೇಕು ಎಂದು ದಿಲ್ಲಿ ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ.
ಅಲ್ಲದೇ ಇನ್ನೋರ್ವ ಪಕ್ಷದ ಮುಖಂಡ ನವೀನ್ ಎನ್ನುವವರ ವಿರುದ್ಧವೂ ಕೂಡ ಆರೋಪ ಎದುರಾಗಿದ್ದು, ಆತನನ್ನೂ ಕೂಡ ಬಂಧಿಸಿಲ್ಲವೆಂದು ಆರೋಪಿಸಿದ್ದಾರೆ.
ಆಮ್ ಆದ್ಮಿ ಪಕ್ಷದಲ್ಲಿ ಮಹಿಳಾ ವಿರೋಧಿ ವ್ಯಕ್ತಿತ್ವಗಳಿರುವುದು ಈ ಘಟನೆಯಿಂದಲೇ ತಿಳಿಯುತ್ತದೆ. ಸಾರಿಗೆ ಇಲಾಖೆ ಸಿಬ್ಬಂದಿಯೇ ಸಚಿವರ ಮೇಲೆ ಆರೋಪ ಮಾಡಿದ್ದು, ಸಚಿವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸಂತ್ರಸ್ಥೆಗೆ ಈ ವಿಚಾರದಲ್ಲಿ ನ್ಯಾಯ ಒದಗಿಸಬೇಕು ಎಂದು ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಹೇಳಿದ್ದಾರೆ.
ಮಹಿಳೆಯರ ವಿರುದ್ಧದ ದೌರ್ಜನ್ಯದ ಪ್ರಕರಣದಲ್ಲಿ ಆರೋಪಿಗಳಾಗಿರುವ ಸಚಿವರು ಶಾಸಕರನ್ನು ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ರಕ್ಷಣೆ ಮಾಡುತ್ತಿದ್ದಾರೆ. ಆದರೆ ಅಂತವರ ವಿರುದ್ಧ ಕ್ರಮ ತೆಗೆದುಕೊಂಡು ಸೂಕ್ತ ಶಿಕ್ಷೆ ನೀಡಬೇಕು ಎಂದಿದ್ದಾರೆ.