ಲೋಕಸಭಾ ಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲಿ ಹಲವು ರೀತಿಯ ಬದಲಾವಣೆಗಳು ಆಗುತ್ತಿದೆ.ಇದೀಗ ನಮ್ಮಶಾಸಕರು ಬಿಜೆಪಿಯರ ಆಮಿಷಕ್ಕೆ ಕಪ್ಪೆಯಂತೆ ಆಡುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕನಕಪುರ [ಜೂ.16] : ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಲುಗಾಡಿಸಲು ಎರಡೂ ಪಕ್ಷಗಳ ಶಾಸಕರಿಗೆ ಬಿಜೆಪಿಯವರು ಚಾಕೋಲೆಟ್ ಹಾಕುತ್ತಿದ್ದಾರೆ. ಅವರ ಆಮಿಷಗಳಿಗೆ ನಮ್ಮ ಶಾಸಕರು ಕಪ್ಪೆಯಂತೆ ಆಡುತ್ತಿದ್ದಾರೆ.
ಆದರೆ ನಾವು ಬಿಜೆಪಿಗೆ ಅಧಿಕಾರ ಸಿಗಲು ಬಿಡಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು. ನಗರದ ಹೊರವಲಯದಲ್ಲಿ ಶನಿವಾರ ಕನಕಪುರ ವಿಧಾನಸಭಾ ಕ್ಷೇತ್ರದ ಮತದಾರರು, ಜೆಡಿಎಸ್-ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರಿಗೆ ಏರ್ಪಡಿಸಿದ್ದ ಕೃತಜ್ಞತಾ ಮತ್ತು ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದೊಂದು ವರ್ಷದಿಂದ ಚಾಕೊಲೆಟ್ ತೋರಿಸುತ್ತಿದ್ದವರು ಇಂದು ಗಾಂಧಿ ಪ್ರತಿಮೆ ಬಳಿ ಮಲಗಿದ್ದಾರೆ. ಅವರು ಅಲ್ಲೇ ಮಲಗಿರಲಿ. ಅವರಿಗೆ ಅಧಿಕಾರ ಬೇಕು. ಅದಕ್ಕಾಗಿ ಅಲ್ಲಿ ಮಲಗಿದ್ದಾರೆ. ಬಿಜೆಪಿಯವರ ಆಮಿಷಗಳಿಗೆ ನಮ್ಮ ಶಾಸಕರು ಕಪ್ಪೆಯಂತೆ ಆಡುತ್ತಿದ್ದಾರೆ.
ಅವರನ್ನು ಹಿಡಿದಿಡಲು ನಾವು ಶ್ರಮ ಪಡುತ್ತಿದ್ದೇವೆ. ಏನೇ ಆದರೂ ಸರಿ ಬಿಜೆಪಿಗೆ ಅಧಿಕಾರ ಸಿಗುವುದಿಲ್ಲ. ಅದಕ್ಕೆ ನಾವು ಅವಕಾಶ ನೀಡುವುದೂ ಇಲ್ಲ ಎಂದರು.
