ಕರ್ನಾಟಕದ ಬಳಿಕ ತೆಲಂಗಾಣದ ಮೇಲೆ ಬಿಜೆಪಿ ಚಿತ್ತ
ಕರ್ನಾಟಕದ ಮೂಲಕ ದಕ್ಷಿಣ ಭಾರತದಲ್ಲಿ ಅಧಿಕಾರಕ್ಕೆ ಬರುವ ಬಿಜೆಪಿ ಕನಸು ನನಸಾಗಲಿಲ್ಲ. ಇದೀಗ ತೆಲಂಗಾಣದತ್ತ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಗಮನ ಹರಿಸುತ್ತಿದ್ದು, ಅಲ್ಲಿ ಬಿಜೆಪಿ ಸರಕಾರ ರಚಿಸುವಲ್ಲಿ ಯಶಸ್ವಿಯಾಗುತ್ತಾರಾ? ನೋಡಬೇಕು. ಪ್ರಾದೇಶಿಕ ಪಕ್ಷಗಳ ಕಪಿ ಮುಷ್ಟಿಯಲ್ಲಿರುವ ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಬಿಜೆಪಿಗೆ ಅಧಿಕಾರ ಬರುವುದು ಅಷ್ಟು ಸುಲಭವೂ ಅಲ್ಲ.
ಹೈದರಾಬಾದ್: ಕರ್ನಾಟಕ ಚುನವಣೆಗಳು ಮುಗಿದು ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ ತನ್ನ ಬಲ ಪ್ರದರ್ಶಿಸಿದ್ದಾಯ್ತು. ಈಗ ಬಿಜೆಪಿ ತೆಲಂಗಾಣದತ್ತ ತನ್ನ ಚಿತ್ತ ಹರಿಸಿದೆ.
'ಇತ್ತೀಚೆಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದೆವು. ಆಗ ಅವರು, 'ಈಗ ಕರ್ನಾಟಕ ಚುನಾವಣೆ ಮುಗಿದಿದೆ. ಇನ್ನು ತೆಲಂಗಾಣದತ್ತ ನಾವು ಗಮನ ಹರಿಸಲಿದ್ದೇವೆ’ ಎಂದು ಹೇಳಿದರು. ಅಲ್ಲದೆ, ಆಂಧ್ರಪ್ರದೇಶ, ಪ.ಬಂಗಾಳ ಹಾಗೂ ಒಡಿಶಾದತ್ತ ಕೂಡ ಪಕ್ಷ ಗಮನ ಹರಿಸಲಿದೆ ಎಂದು ತಿಳಿಸಿದರು' ಎಂದು ತೆಲಂಗಾಣ ಬಿಜೆಪಿ ಅಧ್ಯಕ್ಷ ಕೆ. ಲಕ್ಷ್ಮಣ ಹೇಳಿದರು.
ಅಮಿತ್ ಶಾ ಅವರು ಮುಂದಿನ ತಿಂಗಳು ತೆಲಂಗಾಣಕ್ಕೆ ಬರಲಿದ್ದಾರೆ. ಇಲ್ಲಿನ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿ ರಣತಂತ್ರ ರೂಪಿಸಲಿದ್ದಾರೆ ಎಂದರು.