ಕೇರಳದಲ್ಲಿ ಅಬ್ಬರಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ! ಅಯ್ಯಪ್ಪ ಭಕ್ತರೊಂದಿಗೆ ಬಿಜೆಪಿ ಬಂಡೆಯಂತೆ ನಿಂತಿದೆ ಎಂದ ಶಾ! ಕೇರಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅಮಿತ್ ಶಾ! ದೇವಾಲಯದ ಪ್ರವೇಶದ ಮೂಲಕ ಲಿಂಗ ಸಮಾನತೆ ಸಾಧ್ಯವಿಲ್ಲ! ಕೇರಳದಲ್ಲಿ ತುರ್ತು ಪರಿಸ್ಥಿತಿ ವಾತಾವರಣ ನಿರ್ಮಾಣ
ನವದೆಹಲಿ(ಅ.27): ಬಿಜೆಪಿ ಬಂಡೆಯಂತೆ ಅಯ್ಯಪ್ಪ ಭಕ್ತರೊಂದಿಗೆ ನಿಂತಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಕೇರಳದ ಕಣ್ಮೂರು ಜಿಲ್ಲೆಯ ತಾಳಿಕ್ಕಾವುನಲ್ಲಿ ಬಿಜೆಪಿ ಜಿಲ್ಲಾ ಸಮಿತಿ ಕಚೇರಿ ಉದ್ಘಾಟಿಸಿದ ಬಳಿಕ ಮಾತನಾಡಿರುವ ಅವರು, ಶಬರಿಮಲೆ ಮಹಿಳಾ ಪ್ರವೇಶದ ವಿರುದ್ಧ ಪ್ರತಿಭಟಿಸಿದ್ದ 2000 ಬಿಜೆಪಿ ಹಾಗೂ ಆರ್ಎಸ್ಎಸ್ ಕಾರ್ಯಕರ್ತರನ್ನು ಬಂಧನಕ್ಕೊಳಪಡಿಸುವುದನ್ನು ತೀವ್ರವಾಗಿ ಖಂಡಿಸಿದ್ದಾರೆ.
ಕೇರಳ ರಾಜ್ಯದಲ್ಲಿಂದು ಧಾರ್ಮಿಕ ನಂಬಿಕೆಗಳು ಹಾಗೂ ರಾಜ್ಯ ಸರ್ಕಾರದ ಕ್ರೌರ್ಯಗಳ ನಡುವೆ ಹೋರಾಟ ನಡೆಯುತ್ತಿದೆ. ಬಿಜೆಪಿ, ಆರ್ಎಸ್ಎಸ್ ಹಾಗೂ ಇತರೆ ಸಂಘಟನೆಗಳ 2000ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧನಕ್ಕೊಳಪಡಿಸಲಾಗಿದೆ. ಬಿಜೆಪಿ ಅಯ್ಯಪ್ಪ ಭಕ್ತರ ಜೊತೆಗೆ ಬಂಡೆಯಂತೆ ನಿಂತಿದೆ ಎಂದು ಹೇಳಿದರು.
ಇದೇ ವೇಳೆ ಕೇರಳದ ಆಡಳಿತಾರೂಢ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಶಾ, ವಿವಿಧ ನಿಯಮ ಹಾಗೂ ಪದ್ಧತಿಗಳೊಂದಿಗೆ ಸಾಕಷ್ಟು ದೇವಾಲಯಗಳು ನಡೆಯುತ್ತಿವೆ. ಸರ್ಕಾರದ ವರ್ತನೆ ಹೀಗೆಯೇ ಮುಂದುವರೆದರೆ, ಎಲ್'ಡಿಎಸ್ ಸರ್ಕಾರವನ್ನು ಕೆಳಗಿಳಿಸಲು ಬಿಜೆಪಿ ಹಿಂಜರಿಯುವುದಿಲ್ಲ ಎಂದು ತಿಳಿಸಿದ್ದಾರೆ.
ದೇವಾಲಯದ ಪ್ರವೇಶದ ಮೂಲಕ ಲಿಂಗ ಸಮಾನತೆಯನ್ನು ಸಾಧಿಸಲು ಸಾಧ್ಯವಿಲ್ಲ. ಕೇರಳ ರಾಜ್ಯದಲ್ಲಿಂದು ತುರ್ತು ಪರಿಸ್ಥಿತಿಯಂತಹ ವಾತಾವರಣ ನಿರ್ಮಾಣವಾಗಿದೆ. ಅಯ್ಯಪ್ಪ ಭಕ್ತರನ್ನು ಕೆರಳಿಸಿವುದು ಎಂದರೆ ಬೆಂಕಿಯೊಂದಿಗೆ ಆಟವಾಡಿದಂತೆ ಎಂದು ಎಚ್ಚರಿಸಿದ್ದಾರೆ.
ಇನ್ನು ಅಮಿತ್ ಶಾ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರು ಆಡಳಿತಾರೂಢ ಎಡರಂಗ, ಇದು ಪ್ರಜಾಪ್ರಭುತ್ವಕ್ಕೆ ನೀಡುತ್ತಿರುವ ಎಚ್ಚರಿಕೆ ಎಂದು ಹರಿಹಾಯ್ದಿದೆ. ಈ ಕುರಿತು ಮಾತನಾಡಿರುವ ಸಿಎಂ ಪಿಣರಾಯಿ ವಿಜಯನ್, ಅಮಿತ್ ಶಾ ಹೇಳಿಕೆ ಅತ್ಯಂತ ಖಂಡನಾರ್ಹ ಎಂದು ಕಿಡಿಕಾರಿದರು.
