ಬಿ.ಸಿ ಪಾಟೀಲ್ ಸೇರಿ 16 ಕಾಂಗ್ರೆಸಿಗರಿಗೆ ಬಿಜೆಪಿ ಆಫರ್
ಆಪರೇಷನ್ ಕಮಲದ ಹೆಸರಲ್ಲಿ ಬಿ.ಸಿ.ಪಾಟೀಲ್, ರಹೀಮ್ ಸೇರಿದಂತೆ 15 ರಿಂದ 16 ಶಾಸಕರನ್ನು ಸಂಪರ್ಕಿಸಿದ್ದಾರೆ. ಆದರೂ ಅವರ ಬೇಳೆ ಬೇಯುತ್ತಿಲ್ಲವೆಂದು ಗೊತ್ತಾಗಿ ಸುಮ್ಮನಿದ್ದಾರೆ ಎಂದು ಬಿಜೆಪಿ ಆಪರೇಷನ್ ಕಮಲದ ವಿರುದ್ಧ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಕಲಬುರಗಿ/ಚವಡಾಪುರ: ‘ಆಪರೇಷನ್ ಕಮಲ’ದಲ್ಲಿ ಸಿ.ಪಿ.ಯೋಗೇಶ್ವರ್ ಒಬ್ಬರೇ ಅಲ್ಲ. ಹಲವರು ಭಾಗಿಯಾಗಿದ್ದಾರೆ ಎಂದು ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ. ಕೆ.ಶಿವಕುಮಾರ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಬಿಳಿಸಲು ಬಿಜೆಪಿಗರು ಬಹಳಷ್ಟು ಉತ್ಸುಕರಾಗಿದ್ದಾರೆ.
ಆಪರೇಷನ್ ಕಮಲದ ಹೆಸರಲ್ಲಿ ಬಿ.ಸಿ.ಪಾಟೀಲ್, ರಹೀಮ್ ಸೇರಿದಂತೆ 15 ರಿಂದ 16 ಶಾಸಕರನ್ನು ಸಂಪರ್ಕಿಸಿದ್ದಾರೆ. ಆದರೂ ಅವರ ಬೇಳೆ ಬೇಯುತ್ತಿಲ್ಲವೆಂದು ಗೊತ್ತಾಗಿ ಸುಮ್ಮನಿದ್ದಾರೆ. ಅಲ್ಲದೆ ಸುಖಾ ಸುಮ್ಮನೆ ಆರೋಪ ಮಾಡಿ ಜನರಲ್ಲಿ ಗೊಂದಲ ಸೃಷ್ಟಿಸಿದ್ದಾರೆ. ಅರ್ಜಂಟಾಗಿ ಹೋದ್ರೆ ಅಪಘಾತವಾಗುವ ಸಾಧ್ಯತೆ ಇದೆ.
ಹೀಗಾಗಿ ನಮ್ಮ ಸಮ್ಮಿಶ್ರ ಸರ್ಕಾರ ನಿಧಾನವಾಗಿ ಹೋಗ್ತಿದೆ ಎಂದು ತಿಳಿಸಿದರು. ಇನ್ನೂ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳೆಲ್ಲ ಬಿಜೆಪಿಯವರ ಸೃಷ್ಟಿಯೇ ಹೊರತು ಇನ್ನೇನು ಇಲ್ಲ. ಸಮ್ಮಿಶ್ರ ಸರ್ಕಾರ ಉರುಳುವುದಿಲ್ಲ. ಸಿದ್ದರಾಮಯ್ಯರಿಂದ ಯಾವುದೇ ರಾಜಕೀಯ ಬದಲಾವಣೆಯಾಗುವುದಿಲ್ಲ. ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರ ಮಾರ್ಗದರ್ಶನದಲ್ಲಿ ನಾವೆಲ್ಲ ನಡೆದುಕೊಳ್ಳುತ್ತೇವೆ ಎಂದು ಶಿವಕುಮಾರ್ ಅವರು ತಿಳಿಸಿದರು.