ರಹಸ್ಯ ಬಿಟ್ಟುಕೊಟ್ಟ ಸಿಎಂ ಕುಮಾರಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಬಿಜೆಪಿ ದೂರು
ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಬಿಜೆಪಿ ರಾಜ್ಯಪಾಲ ವಿಆರ್ ವಾಲಾಗೆ ದೂರು ನೀಡಿದೆ. ಸಿಎಂ ಕುಮಾರಸ್ವಾಮಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದು ಸಿಎಂ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ.
ಬೆಂಗಳೂರು[ಏ. 09] ಆದಾಯ ತೆರಿಗೆ ಇಲಾಖೆ ದಾಳಿಗೂ ಮುನ್ನವೇ ದಾಳಿಯಾಗಲಿದೆ ಎಂದು ಹೇಳಿಕೆ ನೀಡಿದ್ದ ಸಿಎಂ ಕುಮಾರಸ್ವಾಮಿ ವಿರುದ್ಧ ಬಿಜೆಪಿ ನಿಯೋಗ ರಾಜ್ಯಪಾಲರಿಗೆ ಮಂಗಳವಾರ ದೂರು ನೀಡಿದೆ.
ಆಡಳಿತದಲ್ಲಿ ಕುಮಾರಸ್ವಾಮಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಜನರಿಗೆ ನೀಡಿದ್ದ ವಚನಗಳನ್ನು ಪಾಲಿಸುವುದರಲ್ಲಿ ವಿಫಲರಾಗಿದ್ದಾರೆ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಆರೋಪಿಸಿದ್ದಾರೆ.
'ಸಿನಿಮಾದವರ ಮೇಲಾದರೆ ಅಲ್ಲ, ಬೆಂಬಲಿಗರ ಮೇಲಾದರೆ ಹೌದು!'
ಐಟಿ ದಾಳಿ ಆಗುವ ವಿಚಾರ ನನಗೆ ಗೊತ್ತಿತ್ತು ಎಂದು ಹೇಳಿ ಸರಕಾರದ ರಹಸ್ಯ ಕಾಪಾಡುವುದರಲ್ಲಿ ಸಿಎಂ ವಿಫಲರಾಗಿದ್ದಾರೆ. 2019ರ ವೇಳೆಗೆ ಸರ್ಜಿಕಲ್ ದಾಳಿಯಾಗುತ್ತದೆ, ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷದ ವಾತಾವರಣ ನಿರ್ಮಾಣ ಆಗುತ್ತದೆ ಎಂದು ಎರಡು ವರ್ಷದ ಹಿಂದೆಯೇ ನಿವೃತ್ತ ಸೈನ್ಯಾಧಿಕಾರಿ ತನಗೆ ಹೇಳಿದ್ದರು ಎನ್ನುವ ಮೂಲಕ ರಹಸ್ಯ ಬಿಟ್ಟುಕೊಟ್ಟಿದ್ದು ಸಿಎಂ ಕುಮಾರಸ್ವಾಮಿ ಮೇಲೆ ಕಾನೂನು ಅನ್ವಯ ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಮನವಿ ಸಲ್ಲಿಕೆ ವೇಳೆ ಶಾಸಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ರಾಜ್ಯ ಬಿಜೆಪಿ ಸಹವಕ್ತಾರ ಎ.ಹೆಚ್.ಆನಂದ, ವಕೀಲ ಶ್ರೀ ವಿನೋದ್ ಕುಮಾರ್ ಇದ್ದರು.