ಕ್ಷುಲ್ಲಕ ಕಾರಣಕ್ಕೆ ಬಿಜೆಪಿ ಶಾಸಕ-ಸಂಸದ ನಡುವೆ ಜಟಾಪಟಿ| ಪರಸ್ಪರ ಚಪ್ಪಲಿಯಲ್ಲಿ ಬಡಿದಾಡಿಕೊಂಡ ಕಮಲ ನಾಯಕರು| ರಸ್ತೆ ನಿರ್ಮಾಣದ ನಾಮಫಲಕದಲ್ಲಿ ಹೆಸರಿಲ್ಲದ ಕಾರಣಕ್ಕೆ ಜಗಳ| ಉತ್ತರಪ್ರದೇಶದ ಬಿಜೆಪಿ ಸಂಸದ ಶರದ್ ತ್ರಿಪಾಠಿ, ರಾಕೇಶ್ ಭಾಘೇಲ್ ನಡುವೆ ಹೊಡೆದಾಟ|
ಲಕ್ನೋ(ಮಾ.06): ಶಿಲಾನ್ಯಾಸ ಕಾರ್ಯಕ್ರಮದಲ್ಲಿ ತಮ್ಮ ಹೆಸರಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಬಿಜೆಪಿಯ ಶಾಸಕ ಮತ್ತು ಸಂಸದ ಪರಸ್ಪರ ಚಪ್ಪಲಿಯಲ್ಲಿ ಬಡಿದಾಡಿಕೊಂಡ ಘಟನೆ ಉತ್ತರಪ್ರದೇಶಲ್ಲಿ ನಡೆದಿದೆ.
ಸಂತ ಕಬೀರ್ ನಗರದ ರಸ್ತೆಯೊಂದರ ನಿರ್ಮಾಣಕ್ಕೆ ಸಂಬಂಧಿಸಿದಂತೆ, ನಾಮಫಲಕದಲ್ಲಿ ತಮ್ಮ ಹೆಸರಿಲ್ಲ ಎನ್ನುವ ಕಾರಣದಿಂದ ಆಕ್ರೋಶಗೊಂಡ ಬಿಜೆಪಿ ಸಂಸದ ಶರದ್ ತ್ರಿಪಾಠಿ ತಮ್ಮದೇ ಪಕ್ಷದ ಶಾಸಕರಾದ ರಾಕೇಶ್ ಭಾಘೇಲ್ ಮೇಲೆ ಹಲ್ಲೆ ಮಾಡಿದ್ದಾರೆ.
ಇಬ್ಬರೂ ನಾಯಕರ ನಡುವೆ ಮಾತಿಗೆ ಮಾತು ಬೆಳೆದು ಈ ವೇಳೆ ಸಂಸದ ತ್ರಿಪಾಠಿ ತಮ್ಮ ಬೂಟಿನಿಂದ ಶಾಸಕರನ್ನು ಹಿಗ್ಗಾಮುಗ್ಗಾ ಹೊಡೆದಿದ್ದಾರೆ. ಇದರಿಂದ ಕೋಪಗೊಂಡ ಶಾಸಕ ರಾಕೇಶ್ ಕೂಡ ಸಂಸದರಿಗೆ ಥಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಏರ್ಪಾಡಾಗಿದ್ದ ಸಭೆಯಲ್ಲೇ ಈ ಕಿತ್ತಾಟ ನಡೆದಿದ್ದು, ಸಭೆಯಲ್ಲಿ ಹಲವಾರು ಹಿರಿಯ ಅಧಿಕಾರಿಗಳು ಕೂಡ ಭಾಗವಹಿಸಿದ್ದರು. ಸದ್ಯ ಶಾಸಕ-ಸಂಸದರ ನಡುವಿನ ಜಟಾಪಟಿ ಬಿಜೆಪಿಗೆ ಭಾರೀ ಮುಜುಗರ ತಂದಿಟ್ಟಿದೆ.
