Asianet Suvarna News Asianet Suvarna News

ಕಾಂಗ್ರೆಸ್‌ ಸೇರಿದ್ದೂ ಜೈಲಿಗೆ ಹೋದವರೇ ! ಕರ್ನಾಟಕಕ್ಕೆ ರಾಹುಲ್ ಅಪಮಾನ !

ಅಕ್ರಮ ಗಣಿಗಾರಿಕೆ ಬಗ್ಗೆ ಮತ್ತು ಜೈಲಿಗೆ ಹೋಗಿ ಬಂದವರು ಎಂಬುದನ್ನು ಮುಂದಿಟ್ಟುಕೊಂಡು ಪಕ್ಷದ ವಿರುದ್ಧ ಹರಿಹಾಯುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದೇ ಕಾರಣಕ್ಕೆ ಜೈಲಿಗೆ ಹೋಗಿದ್ದವರನ್ನೇ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ ಎಂದು ರಾಜ್ಯ ಬಿಜೆಪಿ ತಿರುಗೇಟು ನೀಡಿದೆ.

BJP Leaders Attack Against CM Siddaramaiah

ಬೆಂಗಳೂರು : ಅಕ್ರಮ ಗಣಿಗಾರಿಕೆ ಬಗ್ಗೆ ಮತ್ತು ಜೈಲಿಗೆ ಹೋಗಿ ಬಂದವರು ಎಂಬುದನ್ನು ಮುಂದಿಟ್ಟುಕೊಂಡು ಪಕ್ಷದ ವಿರುದ್ಧ ಹರಿಹಾಯುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದೇ ಕಾರಣಕ್ಕೆ ಜೈಲಿಗೆ ಹೋಗಿದ್ದವರನ್ನೇ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ ಎಂದು ರಾಜ್ಯ ಬಿಜೆಪಿ ತಿರುಗೇಟು ನೀಡಿದೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ವಕ್ತಾರ ಎಸ್‌.ಸುರೇಶ್‌ಕುಮಾರ್‌, ಬಳ್ಳಾರಿಯ ಹೊಸಪೇಟೆಯಲ್ಲಿ ನಡೆದ ಕಾಂಗ್ರೆಸ್‌ ಪಕ್ಷದ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರು ಅಕ್ರಮ ಗಣಿಗಾರಿಕೆ ಬಗ್ಗೆ ಮಾತನಾಡಿದರು. ಆದರೆ ಅದೇ ಕಾರಣಕ್ಕೆ ಒಂದೂವರೆ ತಿಂಗಳು ಕಾಲ ಜೈಲಿಗೆ ಹೋಗಿದ್ದ ಮಾಜಿ ಶಾಸಕ ಆನಂದ್‌ ಸಿಂಗ್‌ ಅವರು ಸಿದ್ದರಾಮಯ್ಯ ಅವರ ಹಿಂದೆ ಹುಸಿ ನಗೆ ಬೀರುತ್ತಿದ್ದರು ಎಂದು ಹೇಳಿದರು.

ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧದ ಪ್ರಕರಣಗಳೆಲ್ಲವೂ ನ್ಯಾಯಾಲಯದಲ್ಲಿ ಇತ್ಯರ್ಥವಾಗಿವೆ. ಆದರೂ ಕಾಂಗ್ರೆಸ್‌ ಮುಖಂಡರು ಅದೇ ವಿಷಯ ಪ್ರಸ್ತಾಪಿಸಿರುವುದು ಹಾಸ್ಯಾಸ್ಪದ ಎಂದರು.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿರುವ ಹಲವು ಅಂಶಗಳಿಗೆ ಸುರೇಶ್‌ಕುಮಾರ್‌ ಅವರು ಇದೇ ವೇಳೆ ತಿರುಗೇಟು ನೀಡಿದರು.

* ರಾಹುಲ್‌ ಗಾಂಧಿ ಅವರು ಕರ್ನಾಟಕ ಭೇಟಿ ಸಂದರ್ಭ ಗುಜರಾತ್‌ ಚುನಾವಣೆ ವೇಳೆ ಮಾಡಿದ ಭಾಷಣವನ್ನೇ ಮಾಡಿದ್ದಾರೆ. ಕರ್ನಾಟಕದ ಅನೇಕ ಜ್ವಲಂತ ಸಮಸ್ಯೆಗಳಿದ್ದರೂ ಅಂತಹ ಯಾವುದೇ ವಿಷಯಗಳನ್ನು ಪ್ರಸ್ತಾಪಿಸದೇ ಇರುವುದು ಕನ್ನಡಿಗರಿಗೆ ಮತ್ತು ಕರ್ನಾಟಕಕ್ಕೆ ಮಾಡಿದ ಅಪಮಾನ.

* ನಿರುದ್ಯೋಗ ಮತ್ತು ರೈತರ ಸಮಸ್ಯೆಗಳನ್ನು ರಾಹುಲ್‌ ಗಾಂಧಿ ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. ಆದರೆ, ಸಿದ್ದರಾಮಯ್ಯ ಅವರ ಅವಧಿಯಲ್ಲಿ ರಾಜ್ಯದಲ್ಲಿ 3,500ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದರ ಹಗ್ಗೆ ಅಪ್ಪಿತಪ್ಪಿಯೂ ಪ್ರಸ್ತಾಪಿಸಲಿಲ್ಲ ಯಾಕೆ? ಇದೇನಾ ರೈತರ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷರ ಕಾಳಜಿ?

* ಮಹದಾಯಿ ವಿವಾದಕ್ಕೆ ತಡೆಯಾಗಿರುವುದೇ ಕಾಂಗ್ರೆಸ್‌. ಆದರೂ ರಾಜ್ಯ ಭೇಟಿ ವೇಳೆ ರಾಹುಲ್‌ ಗಾಂಧಿ ಅವರು ಈ ಬಗ್ಗೆ ಯಾವುದೇ ಪ್ರಸ್ತಾಪ ಮಾಡಲಿಲ್ಲ. ಉತ್ತರ ಕರ್ನಾಟಕ ಭಾಗದ ಜನರು ಕೊನೆಯ ಪಕ್ಷ ಈಗಲಾದರೂ ಕಾಂಗ್ರೆಸ್‌ ಪಕ್ಷ ಮತ್ತು ಅದರ ನಾಯಕರಿಂದ ಮಹದಾಯಿ ವಿವಾದ ಇತ್ಯರ್ಥಕ್ಕೆ ಇಚ್ಛಾಶಕ್ತಿ ಪ್ರದರ್ಶನ ಆಗಬಹುದು ಎಂದು ನಂಬಿದ್ದರು. ಉತ್ತರ ಕರ್ನಾಟಕ ಪ್ರವಾಸ ವೇಳೆ ರಾಹುಲ್‌ ಅವರ ದಿವ್ಯ ಮೌನ ರಾಜ್ಯದ ರೈತರಿಗೆ ಬಗೆದ ಮಹಾದ್ರೋಹ.

* ರಾಹುಲ್‌ ಗಾಂಧಿ ಅವರು ಕರ್ನಾಟಕದಲ್ಲಿ ನಡೆದ ಭ್ರಷ್ಟಾಚಾರಗಳ ಬಗ್ಗೆ ಚಕಾರ ಎತ್ತಿಲ್ಲ. ಮುಖ್ಯಮಂತ್ರಿಗಳ ದುಬಾರಿ ವಾಚು ಪ್ರಕರಣ, ಗೋವಿಂದರಾಜು ಅವರ ಡೈರಿ ಪ್ರಕರಣ, ಸ್ಟೀಲ್‌ ಬ್ರಿಡ್ಜ್‌ ಯೋಜನೆ ಮೂಲಕ ಉತ್ತರ ಪ್ರದೇಶ ಚುನಾವಣೆಗೆ ಅಕ್ರಮವಾಗಿ ಹಣ ನೀಡಿದ್ದನ್ನು ಪ್ರಸ್ತಾಪಿಸಿದ್ದರೆ ಮೆಚ್ಚಬಹುದಿತ್ತು.

* ರಾಜ್ಯದ ಅನೇಕ ಧಾರ್ಮಿಕ ಸಂಸ್ಥೆಗಳಿಗೆ ಮತ್ತು ದೇವಾಲಯಗಳಿಗೆ ರಾಹುಲ್‌ ಗಾಂಧಿ ಅವರು ಮೃದು ಹಿಂದುತ್ವದ ನಾಟಕ ಆಡುತ್ತಿದ್ದಾರೆ. ಆದರೆ, ಅವರದೇ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಧಾರ್ಮಿಕ ಸಂಸ್ಥೆಗಳು ಮತ್ತು ಹಿಂದೂ ಮಠ ಮಂದಿರಗಳ ಮೇಲೆ ಅಂಕುಶ ಹೇರಲು ಹೊರಟಿದ್ದಾರೆ. ಕಾಂಗ್ರೆಸ್ಸಿನ ಈ ಢೋಂಗಿ ನಡವಳಿಕೆಯನ್ನು ರಾಜ್ಯದ ಜನರು ಅರ್ಥ ಮಾಡಿಕೊಳ್ಳುತ್ತಾರೆ ಎಂಬ ವಿಶ್ವಾಸ ನಮಗಿದೆ.

* ರಾಜ್ಯದಲ್ಲಿ ಕುಸಿದಿರುವ ಕಾನೂನು ಮತ್ತು ಸುವ್ಯವಸ್ಥೆಯಿಂದಾಗಿ 25 ಹಿಂದು ಕಾರ್ಯಕರ್ತರ ಹತ್ಯೆಯಾಗಿದ್ದರೂ ಅದರ ಬಗ್ಗೆ ರಾಹುಲ್‌ ಗಾಂಧಿ ಆತಂಕ ವ್ಯಕ್ತಪಡಿಸದೇ ಇರುವುದು ಆಶ್ಚರ್ಯದ ಸಂಗತಿ.

Follow Us:
Download App:
  • android
  • ios