ದೇವೆಗೌಡರೇ ನೀವು‌ ಬಾಂಗ್ಲಾದೇಶದ ಪರವಾಗಿದ್ದೀರಾ ? ಮಮತಾ ಬ್ಯಾನರ್ಜಿ ಅವರು ಬಾಂಗ್ಲಾದವರು ನಮ್ಮಲ್ಲಿ ಇದ್ರೇನು ಅಂತಾರೆ. ನಾಳೆ ಪಾಕಿಸ್ತಾನದವರು ಇದ್ರೇನು ಎನ್ನಬಹುದು - ಆರ್.ಅಶೋಕ್

ಬೆಂಗಳೂರು[ಆ.04]: ಮಮತಾ ಬ್ಯಾನರ್ಜಿ ಜೊತೆ ದೇವೇಗೌಡರು ಕೂಡಾ ಕೈಜೋಡಿಸಿರುವುದು ದುರ್ದೈವ. ಇದು ಒಂದು ರೀತಿ ದೇಶ ದ್ರೋಹಿಗಳಿಗೆ ಬೆಂಬಲ ನೀಡುವ ಕೆಲಸ ಎಂದು ಬಿಜೆಪಿ ಹಿರಿಯ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ದೇವೇಗೌಡರ ಬಗ್ಗೆ ಅಪಾರ ಗೌರವ ಇದೆ.ಆದರೆ ತಮ್ಮ ಮಗ ಮಾಡ್ತಿರೋ ತಪ್ಪಿನ ಬಗ್ಗೆ ಕಿವಿ ಹಿಂಡಿ ಬುದ್ದಿ ಹೇಳದೇ ನನ್ನ ಬಗ್ಗೆಯೇ ಮಾತಾಡುತ್ತಿದ್ದಾರೆ. ದೇವೆಗೌಡರೇ ನೀವು‌ ಬಾಂಗ್ಲಾದೇಶದ ಪರವಾಗಿದ್ದೀರಾ ? ಮಮತಾ ಬ್ಯಾನರ್ಜಿ ಅವರು ಬಾಂಗ್ಲಾದವರು ನಮ್ಮಲ್ಲಿ ಇದ್ರೇನು ಅಂತಾರೆ. ನಾಳೆ ಪಾಕಿಸ್ತಾನದವರು ಇದ್ರೇನು ಎನ್ನಬಹುದು. ಅಂತಹ ಬ್ಯಾನರ್ಜಿ ದೇವೆಗೌಡರನ್ನು ಭೇಟಿ ಮಾಡಿದ್ದಾರೆ. ದೇವೆಗೌಡರು ಮಮತಾ ಬ್ಯಾನರ್ಜಿಗೆ ಬೆಂಬಲಿಸಿದ್ದಾರೆ. ಇದಕ್ಕೆ ಮಾಜಿ ಪ್ರಧಾನಿಗಳೆ ಉತ್ತರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಂದೆ, ಮಕ್ಕಳ ಭಿನ್ನ ನಿಲುವು
ಅಸ್ಸಾಂ ಅಕ್ರಮ ವಲಸಿಗರ ಪರ ನಿಂತಿರುವ ಮಮತಾ ಬ್ಯಾನರ್ಜಿ ಅವರಿಗೆ ದೇವೇಗೌಡರು ಬೆಂಬಲಿಸಿದ್ದಾರೆ. ಹಿಂದೆ ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ ನೆಲೆಸಿರುವ ಅಕ್ರಮ ವಲಸಿಗರನ್ನು ಹೊರ ಹಾಕಿ ಎಂದಿದ್ದರು. ತಂದೆ ಮಕ್ಕಳು ತಮ್ಮ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಬೇಕು. ದೇಶದ ಭದ್ರತೆ ವಿಷಯದಲ್ಲಿ ರಾಜಕೀಯ ಮಾಡಬಾರದು ಎಂದು ಜೆಡಿಎಸ್ ವರಿಷ್ಠರ ವಿರುದ್ಧ ಕಿಡಿಕಾರಿದರು.