17 ಅನರ್ಹರ ಬಗ್ಗೆ ಶೆಟ್ಟರ್ ಕೊಟ್ಟ ಹೊಸ ನ್ಯೂಸ್, ದಂಗಾಗೋ ಸರದಿ ಯಾರದ್ದು!
ಸುದ್ದಿಗಾರರೊಂದಿಗೆ ಮಾತನಾಡುತ್ತ ಅನರ್ಹಗೊಂಡ ಶಾಸಕ ಎಚ್. ವಿಶ್ವನಾಥ್ ನಾವೆಲ್ಲ ಸೇರಿ ಹೊಸ ಪಕ್ಷ ಯಾಕೆ ಕಟ್ಟಬಾರದು? ಎಂದು ಹೇಳಿದ್ದರು. ಈಗ ಜಗದೀಶ್ ಶೆಟ್ಟರ್ ಅವರು ಸಹ ಇದೇ ರೀತಿಯಲ್ಲಿ ಮಾತನಾಡಿದ್ದಾರೆ.
ಹುಬ್ಬಳ್ಳಿ[ಆ. 04] ಅನರ್ಹ ಶಾಸಕರು ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಲು ಸಮರ್ಥರಿದ್ದಾರೆ. ಅವರೊಂದಿಗೆ ನಮ್ಮ ನಾಯಕರು ಮಾತನಾಡಿದ್ದಾರೆ. ಆದರೆ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎನ್ನುವುದು ಸುಳ್ಳು ಎಂದು ಬಿಜೆಪಿ ಹಿರಿಯ ನಾಯಕ ಜಗದೀಶ ಶೆಟ್ಟರ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿ, ಸಚಿವ ಸಂಪುಟ ವಿಸ್ತರಣೆ ವಿಚಾರ ಮುಖ್ಯಮಂತ್ರಿಗಳಿಗೆ ಬಿಟ್ಟದ್ದು. ನಾಳೆ ಅಥವಾ ನಾಡಿದ್ದು ಸಿಎಂ ಯಡಿಯೂರಪ್ಪ ದೆಹಲಿಗೆ ತೆರಳಲಿದ್ದಾರೆ. ಹೈಕಮಾಂಡ್ ನಿರ್ದೇಶನದಂತೆ ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದಾರೆ. ಡಿಸಿಎಂ ಸ್ಥಾನ ನೇಮಕ ಮಾಡುವ ವಿಚಾರ ಹೈಕಮಾಂಡ್ಗೆ ಬಿಟ್ಟದ್ದು ಎಂದರು.
'ನಡತೆಗೆಟ್ಟ ಹುಡ್ಗಿ ಸ್ಥಿತಿ ಅತೃಪ್ತರದ್ದಾಗಿದ್ದು, ಬೀದಿಗೆ ಬಂದು ದೇವದಾಸಿಯರಾಗಿದ್ದಾರೆ'
ಉತ್ತರ, ದಕ್ಷಿಣ ಎನ್ನುವ ತಾರತಮ್ಯ ನಮ್ಮಲ್ಲಿ ಇಲ್ಲ. ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಶ್ರಮಿಸಲಿದೆ. ಉತ್ತರ ಕರ್ನಾಟಕ ಭಾಗದಲ್ಲಿನ ನೆರೆ ಹಾವಳಿ ಕುರಿತು ಸಿಎಂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳ ಜನರಿಗೆ ಬಿಜೆಪಿ ಸರ್ಕಾರ ಸ್ಪಂದಿಸಲಿದೆ. ನಾನು ಯಾವುದೇ ಸ್ಥಾನದ ನಿರೀಕ್ಷೆಯಲ್ಲಿಲ್ಲ ಪಕ್ಷ ನನಗೆ ಯಾವುದೇ ಜವಾಬ್ದಾರಿ ಕೊಟ್ಟರೂ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದರು.
ಕುಮಾರ್ ಸ್ವಾಮಿಯವರು ಒಂದೇ ಜಾತಿಗೆ ಸೀಮಿತವಾಗಿ ಯಾಕೆ ಕೆಲಸ ಮಾಡ್ತಾರೆ? ಕುಮಾರಸ್ವಾಮಿಗೆ ಬೇರೆ ಸಮುದಾಯದ ಜನರು ಬೇಡವಾಗಿದ್ದಾರಾ? ಎರಡು ಬಾರಿ ಸಿಎಂ ಆಗಿದ್ದಂತವರು ಜಾತಿ ಧರ್ಮ ಮೀರಿ ವರ್ತಿಸಬೇಕಿತ್ತು. ಕುಮಾರಸ್ವಾಮಿ ಕೇವಲ ಒಕ್ಕಲಿಗರಿಗೆ ಮಾತ್ರ ಕೆಲಸ ಮಾಡ್ತಾರಾ? ರವಿಕಾಂತೆ ಗೌಡ ಬಗ್ಗೆ ಮಾತ್ರ ಯಾಕೆ ಪ್ರೀತಿ-ಒಲವು ? ರವಿಕಾಂತೆ ಗೌಡ ಏನ್ ಮಹಾನ್ ವ್ಯಕ್ತಿನಾ? ಒಕ್ಕಲಿಗ ಅನ್ನುವ ಕಾರಣಕ್ಕೆ ರವಿಕಾಂತೆ ಗೌಡ ಬಗ್ಗೆ ಮಾತನಾಡುತ್ತೀರಾ ಎಂದು ಶೆಟ್ಟರ್ ಖಾರವಾಗಿಯೇ ಪ್ರಶ್ನೆಮಾಡಿದ್ದಾರೆ.