ಮೈತ್ರಿ ಸರಕಾರಕ್ಕೆ ಸಿಟಿ ರವಿ ಹಾಕಿದ ಸವಾಲೇನು?
ಪ್ರತ್ಯೇಕ ರಾಜ್ತದ ಕೂಗಿನ ಹಿಂದೆ ಬಿಜೆಪಿ ನಾಯಕರಿದ್ದಾರೆ ಎಂಬ ಸಚಿವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮುಖಂಡ, ಶಾಸಕ ಸಿ.ಟಿ.ರವಿ ಅಭಿವೃದ್ಧಿಯಾಗಿಲ್ಲ ಎಂದ ಮಾತ್ರಕ್ಕೆ ಎಲ್ಲರೂ ಪ್ರತ್ಯೇಕ ರಾಜ್ಯ ಕೇಳಲಿಕ್ಕೆ ಸಾಧ್ಯವಾ ಎಂದು ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರು(ಆ.1) ನಮ್ಮ ಭಾಗದಲ್ಲೂ ಅಭಿವೃದ್ಧಿ ಆಗಿಲ್ಲ. ಹಾಗಂತ ನಾವು ಪ್ರತ್ಯೇಕ ರಾಜ್ಯ ಕೇಳೋಕೆ ಆಗುತ್ತಾ? ಯಾರ ಅವಧಿಯಲ್ಲಿ ಎಷ್ಟು ಅನುದಾನ ಬಿಡುಗಡೆಯಾಗಿದೆ ಎಂದು ಸರಕಾರ ಶ್ವೇತ ಪತ್ರ ಹೊರಡಿಸಲಿ ಎಂದು ಸವಾಲು ಹಾಕಿದ್ದಾರೆ.
ಕಾಂಗ್ರೆಸ್ ಸಚಿವರ ವಿರುದ್ಧ ಆಕ್ರೋಶ ಹೊರಹಾಕಿರುವ ಮಾಜಿ ಸಚಿವ ಸಿಟಿ ರವಿ, ಈ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡ್ತಿಲ್ಲ. ರಾಜಕೀಯ ಮಾಡ್ತಾ ಇರೋದು ಕಾಂಗ್ರೆಸ್ ಹಾಗೂ ಈಗಿನ ಸರ್ಕಾರ. ಬಿಜೆಪಿ ಅಖಂಡ ಕರ್ನಾಟಕದ ಪರವಾಗಿದೆ. ನಮ್ಮ ಪಕ್ಷದ ನಿಲುವು ಅಖಂಡ ಕರ್ನಾಟಕ ಪರ, ಸುವರ್ಣ ಕರ್ನಾಟಕದ ಪರ ಎಂದು ಹೇಳಿದರು.
ಪ್ರತ್ಯೇಕ ರಾಜ್ಯದ ಕೂಗಿಗೆ ಕಾರಣ ಕಂಡುಹಿಡಿದ ಸಿಟಿ ರವಿ
ಶ್ರೀರಾಮುಲು, ಉಮೇಶ್ ಕತ್ತಿ ಹೇಳಿಕೆ ಅವರ ವೈಯಕ್ತಿಕವಾದದ್ದು. ಧೂಳು ಹಿಡಿದಿದ್ದ ನಂಜುಡಪ್ಪ ವರದಿ ಜಾರಿಗೆ ಮುಂದಾಗಿದ್ದು ನಾವು. ನಮ್ಮ ಕಾಲದಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇವೆ. ಚೆನ್ನಪಟ್ಟಣದಲ್ಲಿನ ಸಿಎಂ ಹೇಳಿಕೆಯಿಂದ ಇವತ್ತಿನ ಈ ಹೋರಾಟಕ್ಕೆ ಕಾರಣ. ಯಾರೇ ಏನೇ ಹೇಳಿದರೂ ಕರ್ನಾಟಕ ಅಖಂಡವಾಗಿರುತ್ತೆ ಅಭಿವೃದ್ಧಿ ಕಡೆಗಣಿಸುವುದರಿಂದ ಈ ಹೋರಾಟಗಳು ನಡೆಯುತ್ತಿದೆ ಎಂದರು.
ಪ್ರತ್ಯೇಕತೆ ಕಿಚ್ಚಿಗೆ ಮಣಿದರಾ ಸಿಎಂ ಕುಮಾರಸ್ವಾಮಿ?
ಧರ್ಮಸಿಂಗ್, ಮಲ್ಲಿಕಾರ್ಜುನ ಖರ್ಗೆ, ವಿರೇಂದ್ರ ಪಾಟೀಲ್, ಅವಧಿಯಲ್ಲಿ ಅಭಿವೃದ್ಧಿ ಆಗಿಲ್ಲ ಅಂತ ಕಾಂಗ್ರೆಸ್ ನವರು ಒಪ್ಪುತ್ತಾರಾ? ಎಂದು ಪ್ರಶ್ನೆ ಮಾಡಿದ ರವಿ ಯಾರ ಅವಧಿಯಲ್ಲಿ ಎಷ್ಟು ಅನುದಾನ ಬಿಡುಗಡೆ ಆಗಿದೆ ಅಂತ ಶ್ವೇತಪತ್ರ ಹೊರಡಿಸಲಿ ಎಂದು ಸವಾಲ್ ಹಾಕಿದರು.
ಉಮೇಶ್ ಕತ್ತಿ 20 ವರ್ಷದಿಂದ ಈ ಹೇಳಿಕೆ ನೀಡ್ತಿದ್ದಾರೆ. ಉಮೇಶ್ ಕತ್ತಿ ಹೇಳಿಕೆ ನಮ್ಮ ಪಕ್ಷದ ನಿಲುವು ಅಲ್ಲ.ಸಿಎಂ ಹೇಳಿಕೆಯಿಂದಲೇ ಈ ಕೂಗು ಬಲವಾಗಿರೋದು. ಕೊಪ್ಪಳದ ರೈತರ ಬಗ್ಗೆ ಸಿಎಂ ಹೇಳದೇ ಇದ್ದಿದ್ದರೆ ಈ ಹೋರಾಟ ಇಷ್ಟು ಬಲಗೊಳ್ಳುತ್ತಿರಲಿಲ್ಲ. ಆಳುವವರು ಸಮಚಿತ್ತದಿಂದ ಕೆಲಸ ಮಾಡಬೇಕು.ಚಇಲ್ಲವಾದರೆ ಹೀಗೆ ಆಗೋದು ಎಂದು ಸಿಎಂ ಕುಮಾರಸ್ವಾಮಿ ವಿರುದ್ದ ಸಿಟಿ ರವಿ ಆಕ್ರೋಶ ವ್ಯಕ್ತಪಡಿಸಿದರು.