ಇಂದಿರಾ ಕ್ಯಾಂಟೀನ್ನಲ್ಲಿ ಭಾರೀ ಅವ್ಯವಹಾರ!
ಇಂದಿರಾ ಕ್ಯಾಂಟೀನ್ನಲ್ಲಿ ಭಾರೀ ಅವ್ಯವಹಾರ
ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಗಂಭೀರ ಆರೋಪ
ಸರ್ಕಾರದ ವಿರುದ್ದ ಬಿಜೆಪಿ ಶಾಸಕ ಎ ರಾಮದಾಸ್ ಕಿಡಿ
ದೆಹಲಿ ಮೂಲದ ಕಂಪನಿಗೆ ಟೆಂಡರ್ ಕೊಟ್ಟು ಭ್ರಷ್ಟಾಚಾರ
ಎಐಸಿಸಿಗೆ ಕಿಕ್ ಬ್ಯಾಕ್ ಕೊಟ್ಟ ಆರೋಪ ಮಾಡಿದ ರಾಮದಾಸ್
ಬೆಂಗಳೂರು(ಜು.11): ಹಿಂದಿನ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇಂದಿರಾ ಕ್ಯಾಂಟೀನ್ನಲ್ಲಿ ಭಾರೀ ಅವ್ಯವಹಾರ ನಡೆದ ಆರೋಪ ಕೇಳಿ ಬಂದಿದೆ.
ವಿಧಾನಸಭೆಯಲ್ಲಿ ಇಂದು ನಡೆದ ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಬಿಜೆಪಿ ಶಾಸಕ ಎ ರಾಮದಾಸ್ ಈ ಆರೋಪ ಮಾಡಿದ್ದಾರೆ. ಪ್ರಸಕ್ತ ಸಮ್ಮಿಶ್ರ ಸರ್ಕಾರ ಹೊಸದಾಗಿ ಆರಂಭಿಸಲು ಉದ್ದೇಶಿಸಿರುವ ಇಂದಿರಾ ಕ್ಯಾಂಟೀನ್ನಲ್ಲಿ ಅವ್ಯವಹಾರ ನಡೆದಿದೆ ಎಂದು ರಾಮದಾಸ್ ಆರೋಪಿಸಿದ್ದಾರೆ.
ಸದ್ಯ 247 ಹೊಸ ಕ್ಯಾಂಟೀನ್ ಉದ್ಘಾಟಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಇದಕ್ಕೆ ದೆಹಲಿ ಮೂಲದ ರಿವಾಸ್ ಎಂಬ ಕಂಪನಿಗೆ ಟೆಂಡರ್ ಕೊಡಲಾಗಿದೆ. 57 ರೂ ದರದಲ್ಲಿ ಉಪಹಾರ ಕೊಡಲು ತೀರ್ಮಾನಿಸಲಾಗಿದ್ದು, ಆದರೆ 60 ರೂ. ಬಿಲ್ ಮಾಡಲು ಪ್ಲ್ಯಾನ್ ಮಾಡಲಾಗಿದೆ ಎಂದು ರಾಮದಾಸ್ ಗಂಭೀರ ಆರೋಪ ಮಾಡಿದ್ದಾರೆ.
ಇದೇ ವೇಳೆ ಸರ್ಕಾರ 4682 ಕೋಟಿ ರೂ ಲೆಬರ್ ಸೇಸ್ ಸಂಗ್ರಹಿಸಿದ್ದು, ಈ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಲಾಗಿದೆ ಎಂದು ರಾಮದಾಸ್ ಆರೋಪಿಸಿದ್ದಾರೆ. ಕಳೆದ ೧೫ ದಿನಗಳಲ್ಲಿ ನಡೆದಿರುವ ಹಗರಣ ಇದಾಗಿದ್ದು, 150 ಕೋಟಿ ಕಿಕ್ ಬ್ಯಾಕ್ ನಲ್ಲಿ 50 ಕೋಟಿ ರೂ ಎಐಸಿಸಿಗೆ ಸಂದಾಯವಾಗಿದೆ ಎಂದು ರಾಮದಾಸ್ ಗಂಭೀರ ಆರೋಪ ಮಾಡಿದರು.
ಇನ್ನು ರಾಮದಾಸ್ ಆರೋಪಕ್ಕೆ ಕೆಂಡಾಮಂಡಲವಾದ ಸಚಿವ ಡಿಕೆ ಶಿವಕುಮಾರ್, ಇಂತಹ ಆಧಾರರಹಿತ ಆರೋಪ ಮಾಡಲು ಬಿಜೆಪಿಯವರಿಗೆ ನಾಚಿಕೆಯಾಗಬೇಕು ಎಂದು ಹರಿಹಾಯ್ದರು. ರಾಮದಾಸ್ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದ ಡಿಕೆಶಿ, ಒಂದು ವೇಳೆ ಈ ಕುರಿತು ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು. ಬಿಜೆಪಿ ಶಾಸಕ ರಾಮದಾಸ್ ಮಾಡಿದ ಆರೋಪ ಸದನದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಡುವೆ ಭಾರೀ ಮಾತಿನ ಚಕಮಕಿಗೆ ಕಾರಣವಾಯಿತು.