ಸಂಪುಟ ವಿಸ್ತರಣೆ ಬೆನ್ನಲ್ಲೇ ಇದೀಗ ಮೈತ್ರಿ ಸರ್ಕಾರ ಉರುಳಿಸುವ ಯತ್ನಗಳು ಜೋರಾಗಿದೆ ಎನ್ನಲಾಗಿದೆ. ರಮೇಶ್ ಜಾರಕಿಹೊಳಿ ಸರ್ಕಾರ ಉರುಳಿಸಲು ಪ್ಲಾನ್ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. 

ಬೆಂಗ​ಳೂ​ರು​/ ಗೋಕಾಕ್‌ :  ಸಚಿವ ಸ್ಥಾನ ಮಾತ್ರ​ವಲ್ಲ, ನಿಗಮ ಮಂಡ​ಳಿಗೂ ತಮ್ಮನ್ನು ಪರಿ​ಗ​ಣಿ​ಸದೇ ಶಿಕ್ಷೆ ವಿಧಿ​ಸಿರುವ ಕಾಂಗ್ರೆಸ್‌ ನಾಯ​ಕತ್ವದ ವಿರುದ್ಧ ಸೆಟೆದು ನಿಂತಿ​ರುವ ಕಾಂಗ್ರೆ​ಸ್‌ನ ಅತೃ​ಪ್ತ ಶಾಸ​ಕರ ಗುಂಪೊಂದು ಸಮ್ಮಿಶ್ರ ಸರ್ಕಾರ ಕೆಡ​ವಲು ಮಾಡು ಇಲ್ಲವೇ ಮಡಿ ಎಂಬಂತಹ ಪ್ರಯ​ತ್ನಕ್ಕೆ ಮುಂದಾ​ಗಿದ್ದು, ಇದಕ್ಕೆ ಬಿಜೆ​ಪಿಯ ದೊಡ್ಡ ಮಟ್ಟದ ಬೆಂಬಲ ದೊರ​ಕಿದೆ ಎನ್ನ​ಲಾ​ಗಿ​ದೆ.

ಸಚಿವ ಸ್ಥಾನ​ದಿಂದ ಕೊಕ್‌ ಪಡೆದ ರಮೇಶ್‌ ಜಾರ​ಕಿ​ಹೊಳಿ ಅವರ ನೇತೃ​ತ್ವ​ದಲ್ಲಿ ಒಗ್ಗೂ​ಡಿ​ರುವ ಈ ಅತೃಪ್ತ ಶಾಸ​ಕರ ಗುಂಪು, ಯಾವುದೇ ಬಹಿ​ರಂಗ ಚಟು​ವ​ಟಿ​ಕೆ​ಗ​ಳಲ್ಲಿ ಕಾಣಿ​ಸಿ​ಕೊ​ಳ್ಳದೆ ಗುಪ್ತವಾಗಿ ಕಾಂಗ್ರೆ​ಸ್‌ನ ಸ್ಥಾನ ವಂಚಿತ ಶಾಸ​ಕ​ರನ್ನು ಸಂಪ​ರ್ಕಿ​ಸಲು ಮುಂದಾ​ಗಿದೆ. ಸಮ್ಮಿಶ್ರ ಸರ್ಕಾ​ರ​ವನ್ನು ಅಸ್ಥಿರಗೊಳಿ​ಸಲು ಬಿಜೆಪಿಗೆ ಬೇಕಿ​ರುವ ಸಂಖ್ಯಾಬಲ​ವನ್ನು ಒಗ್ಗೂ​ಡಿ​ಸಲು ಈ ಗುಂಪು ತನ್ನೆಲ್ಲ ಸಾಮರ್ಥ್ಯ ವಿನಿ​ಯೋ​ಗಿ​ಸಿದೆ ಎಂದು ಮೂಲ​ಗಳು ಹೇಳಿವೆ. ಈ ಮೂಲ​ಗಳ ಪ್ರಕಾರ 18ರಿಂದ 20 ಶಾಸ​ಕ​ರನ್ನು ಒಗ್ಗೂ​ಡಿ​ಸು​ವಂತೆ ಈ ಗುಂಪಿಗೆ ಬಿಜೆ​ಪಿ​ಯಿಂದ ಸೂಚನೆ ಬಂದಿದ್ದು, ಅದ​ರಂತೆ ಈ ಸಂಖ್ಯಾ​ಬ​ಲ​ವನ್ನು ಒಗ್ಗೂ​ಡಿ​ಸಲು ಪ್ರಯತ್ನ ಆರಂಭಿ​ಸಿದೆ ಎಂದು ತಿಳಿದುಬಂದಿ​ದೆ.

ಒಂದು ಬಾರಿ ಉತ್ತಮ ಸಂಖ್ಯಾಬಲ ದೊರೆತರೆ ಬಹಿ​ರಂಗಕ್ಕೆ ಬರ​ಲಿ​ರುವ ಈ ಗುಂಪು ಕಾಂಗ್ರೆ​ಸ್‌ಗೆ ರಾಜೀ​ನಾ​ಮೆ​ಯನ್ನು ಪ್ರಕ​ಟಿ​ಸ​ಲಿದೆ. ಈ ಎಲ್ಲಾ ಬೆಳ​ವ​ಣಿ​ಗೆ​ಗ​ಳನ್ನು ಮುಂದಿನ 10 ದಿನ​ಗ​ಳೊ​ಳಗೆ ಮುಗಿ​ಸುವ ಗುರಿ​ಯನ್ನು ಈ ಗುಂಪಿಗೆ ನೀಡ​ಲಾ​ಗಿದ್ದು, ಒಂದು ವೇಳೆ ಈ ಗುರಿ​ಯನ್ನು ಅತೃ​ಪ್ತರ ಗುಂಪು ಮುಟ್ಟ​ದಿ​ದ್ದಲ್ಲಿ ಬಿಜೆಪಿ ನಾಯ​ಕತ್ವವೇ ಇಡೀ ಕಾರ್ಯಾ​ಚ​ರ​ಣೆ​ಯನ್ನು ತನ್ನ ಕೈಗೆ ತೆಗೆ​ದು​ಕೊ​ಳ್ಳ​ಲಿದೆ. ಸಂಖ್ಯಾ​ಬ​ಲ​ದಿಂದ ಸರ್ಕಾರ ಕೆಡ​ವಲು ಸಾಧ್ಯ​ವಾ​ಗ​ದಿ​ದ್ದಲ್ಲಿ ಅನ್ಯ ಮಾರ್ಗ​ಗ​ಳಿಂದ ಸಮ್ಮಿಶ್ರ ಸರ್ಕಾ​ರ​ವನ್ನು ಅಸ್ಥಿ​ರ​ಗೊ​ಳಿ​ಸುವ ಪ್ರಯತ್ನವೂ ನಡೆ​ಯ​ಲಿದೆ ಎಂದು ತಿಳಿದುಬಂದಿ​ದೆ.

ಒಂದು ಮೂಲ​ದ ಪ್ರಕಾರ ಈ ಗುಂಪಿನ ನಾಯ​ಕತ್ವವನ್ನು ಸಚಿವ ಸ್ಥಾನ​ದಿಂದ ಕೊಕ್‌ ಪಡೆ​ದ ರಮೇಶ್‌ ಜಾರ​ಕಿ​ಹೊಳಿ ಹೊತ್ತಿ​ದ್ದಾರೆ. ಅವರ ಹಿಂದೆ ಬಿಜೆ​ಪಿಯ ದೊಡ್ಡ ಮಟ್ಟದ ನಾಯ​ಕರು ಇದ್ದಾರೆ ಎನ್ನ​ಲಾ​ಗಿದೆ. ಅವರ ಮಾರ್ಗ​ದ​ರ್ಶ​ನ​ದಲ್ಲೇ ರಮೇಶ್‌ ಜಾರ​ಕಿ​ಹೊಳಿ ಗುಂಪು ಆಪ​ರೇ​ಷನ್‌ ಆರಂಭಿ​ಸಿದೆ ಎನ್ನ​ಲಾ​ಗಿದೆ. ಈ ಹಿನ್ನೆ​ಲೆಯಲ್ಲಿ ಭಾನು​ವಾರ ಗೋಕಾ​ಕ್‌​ನಿಂದ ಬೆಂಗ​ಳೂ​ರಿ​ನತ್ತ ರಮೇಶ್‌ ಜಾರ​ಕಿ​ಹೊಳಿ ಧಾವಿ​ಸಿ​ದರು ಎನ್ನ​ಲಾ​ಗಿ​ದ್ದರೂ, ತಡ​ರಾ​ತ್ರಿ​ಯ​ವ​ರೆಗೂ ಅವರು ಬೆಂಗ​ಳೂರು ಮುಟ್ಟಿ​ರ​ಲಿಲ್ಲ. ಬಹು​ತೇಕ ಸೋಮ​ವಾರ ತಮ್ಮ ಆಪ್ತರ ಸಭೆ​ಯೊಂದನ್ನು ಅವರು ಬೆಂಗ​ಳೂ​ರಿ​ನಲ್ಲಿ ನಡೆ​ಸ​ಲಿದ್ದು, ಅಲ್ಲಿ ಕಾಂಗ್ರೆ​ಸ್‌ಗೆ ಒಂದು ಸ್ಪಷ್ಟಸಂದೇಶ ನೀಡ​ಲಿ​ದ್ದಾರೆ ಎನ್ನ​ಲಾ​ಗಿ​ದೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ:

ಇನ್ನು ಭಾನು​ವಾರ ಗೋಕಾ​ಕ್‌ನಲ್ಲಿ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ರಮೇಶ್‌ ಜಾರಕಿಹೊಳಿ, ತಮ್ಮ ಶಾಸಕ ಸ್ಥಾನಕ್ಕೆ ರಾಜೀ​ನಾಮೆ ನೀಡು​ವು​ದಾಗಿಯೂ ಪ್ರಕ​ಟಿ​ಸಿ​ದರು.

ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಲು ನಿರ್ಧರಿಸಿದ್ದೇನೆ. ರಾಜಿನಾಮೆಯನ್ನು ಇಂದೇ ಸಲ್ಲಿಸಬಹುದು ಅಥವಾ ಒಂದು ವಾರ ಕಾಲಾವಕಾಶ ತೆಗೆದುಕೊಳ್ಳಬಹುದು. ನನ್ನ ಜತೆ ಬರುವ ಶಾಸಕರ ಸಂಖ್ಯೆಯನ್ನು ಸದ್ಯ ಬಹಿ​ರಂಗಪಡಿ​ಸು​ವು​ದಿಲ್ಲ. ಸಮಯ ಬಂದಾಗ ನಾನೇ ಮಾಧ್ಯಮದವರನ್ನು ಕರೆಯಿಸಿ ಹೇಳುತ್ತೇನೆ ಎಂದರು.

ನನ್ನ ದೂರವಾಣಿ ಕರೆಗಳನ್ನು ಕದ್ದು ಕೇಳಲಾಗುತ್ತಿದೆ. ಅದು ನನಗೆ ಗೊತ್ತಿದೆ. ಆದರೆ, ನಾನು ಯಾವು​ದಕ್ಕೂ ಹಿಂಜ​ರಿ​ಯು​ವು​ದಿಲ್ಲ ಎಂದೂ ಅವರು ಹೇಳಿ​ದ​ರು.

ರಾಜೀ​ನಾಮೆ ನೀಡಿ​ದರೂ ಅಂಗೀ​ಕ​ರಿ​ಸು​ವು​ದಿ​ಲ್ಲ!

ರಮೇಶ್‌ ಜಾರ​ಕಿ​ಹೊಳಿ ನೇತೃ​ತ್ವದ ಶಾಸ​ಕರ ಗುಂಪು ರಾಜೀ​ನಾಮೆ ಸಲ್ಲಿ​ಸುವ ಹಂತ ಮುಟ್ಟಿ​ದರೆ, ಅದನ್ನು ನಿಭಾ​ಯಿ​ಸಲು ಕಾಂಗ್ರೆಸ್‌ ಸಹ ಸಜ್ಜಾ​ಗಿದೆ ಎನ್ನ​ಲಾ​ಗಿ​ದೆ.

ವಾಸ್ತ​ವ​ವಾಗಿ ರಮೇಶ್‌ ಜಾರ​ಕಿ​ಹೊಳಿ ಅವ​ರೊಂದಿಗೆ ಸ್ಪಷ್ಟ​ವಾಗಿ ಎಷ್ಟುಮಂದಿ ಶಾಸ​ಕರು ಇದ್ದಾರೆ ಅಥವಾ ಸೇರು​ತ್ತಾರೆ ಎಂಬುದು ಸ್ಪಷ್ಟ​ವಿಲ್ಲ. ಒಂದು ಬಾರಿ ಈ ಗುಂಪು ಬಹಿ​ರಂಗಕ್ಕೆ ಬಂದು ರಾಜೀ​ನಾಮೆ ಸಲ್ಲಿ​ಸಿ​ದರೂ ಅದನ್ನು ಅಂಗೀ​ಕ​ರಿ​ಸದೇ ವಿಳಂಬ ಮಾಡುವ ಹಾಗೂ ಈ ವಿಳಂಬದ ಅವ​ಧಿ​ಯಲ್ಲಿ ರಮೇಶ್‌ ಜತೆ ಗುರು​ತಿ​ಸಿ​ಕೊಂಡಿ​ರುವ ಶಾಸ​ಕ​ರನ್ನು ಮನ​ವೊ​ಲಿ​ಸುವ ಪ್ರಕ್ರಿಯೆ ಆರಂಭಿ​ಸಲು ಕಾಂಗ್ರೆಸ್‌ ಸಿದ್ಧತೆ ನಡೆ​ಸಿದೆ ಎನ್ನ​ಲಾ​ಗಿ​ದೆ.

ಶಾಸ​ಕರು ರಾಜೀ​ನಾ​ಮೆ​ಯನ್ನು ಸ್ಪೀಕರ್‌ ಅವ​ರಿಗೆ ನೀಡ​ಬೇಕು. ರಾಜೀ​ನಾ​ಮೆ​ಯನ್ನು ಅಂಗೀ​ಕ​ರಿ​ಸುವ ಪ್ರಕ್ರಿ​ಯೆ​ಯನ್ನು ವಿಳಂಬ​ ಮಾಡು​ವಂತೆ ಸ್ಪೀಕರ್‌ ಅವ​ರಿಗೆ ಈಗಾ​ಗಲೇ ಸೂಚನೆ ಹೋಗಿದೆ ಎಂದು ಈ ಮೂಲ​ಗಳು ಹೇಳು​ತ್ತವೆ.

ಅಲ್ಲದೆ, ರಮೇಶ್‌ ಜಾರ​ಕಿ​ಹೊಳಿ ಹಾಗೂ ಅವರ ಆಪ್ತ ಕೆಲ ಶಾಸ​ಕ​ರನ್ನು ಹೊರ​ತು​ಪ​ಡಿಸಿ, ಉಳಿದ ಅಸ​ಮಾ​ಧಾನ ಹೊಂದಿ​ರುವ ಶಾಸ​ಕ​ರನ್ನು ವಿಶ್ವಾ​ಸಕ್ಕೆ ತೆಗೆ​ದು​ಕೊ​ಳ್ಳಲು ಹಾಗೂ ಅತೃ​ಪ್ತರ ನಡೆ​ಯನ್ನು ಸೂಕ್ಷ್ಮ​ವಾಗಿ ಗಮ​ನಿ​ಸಲು ಹೈಕ​ಮಾಂಡ್‌ ರಾಜ್ಯ ನಾಯ​ಕ​ತ್ವಕ್ಕೆ ಸೂಚಿ​ಸಿದೆ. ಅದ​ರಂತೆ ರಾಜ್ಯ ನಾಯ​ಕರು ಅತೃ​ಪ್ತರ ಮೇಲೆ ಕಣ್ಣಿ​ಟ್ಟಿ​ದ್ದಾರೆ ಎನ್ನ​ಲಾ​ಗಿ​ದೆ.

ಮಾಧ್ಯಮದವರ ಮೇಲೆ ರಮೇಶ್‌ ಗರಂ

ತಮ್ಮನ್ನು ಸಚಿವ ಸ್ಥಾನದಿಂದ ಕೈಬಿಟ್ಟವಿಚಾರ ತಿಳಿಯುತ್ತಿದ್ದಂತೆ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿ ಯಾರ ಸಂಪರ್ಕಕ್ಕೂ ಸಿಗದೇ ನಾಪತ್ತೆಯಾಗಿದ್ದ ಗೋಕಾಕ್‌ನ ಶಾಸಕ ರಮೇಶ್‌ ಜಾರಕಿಹೊಳಿ, ಭಾನುವಾರ ಬೆಳಗ್ಗೆ ಗೋಕಾಕ್‌ ಫಾಲ್ಸ್‌ನ ಕೈಗಾರಿಕಾ ಪ್ರದೇಶದಲ್ಲಿರುವ ಬ್ಯಾಡ್ಮಿಂಟನ್‌ ಅಂಗಳದಲ್ಲಿ ದಿಢೀರ್‌ ಪ್ರತ್ಯಕ್ಷವಾದರು.

ಈ ವೇಳೆ ಸಚಿವ ಸ್ಥಾನದಿಂದ ಕೈಬಿಟ್ಟಕುರಿತು ಪ್ರತಿಕ್ರಿಯೆ ಪಡೆಯಲು ಮುಂದಾದ ಮಾಧ್ಯಮಗಳ ಮೇಲೆ ಗರಂ ಆದ ರಮೇಶ್‌ ಜಾರಕಿಹೊಳಿ, ನನ್ನನ್ನು ಹಾಳು ಮಾಡಿದ್ದು ದೃಶ್ಯ ಮಾಧ್ಯಮದವರು ಎಂದು ನೇರವಾಗಿ ಮಾಧ್ಯಮದವರ ವಿರುದ್ಧ ಗುಡುಗಿದರು. ಅಲ್ಲದೇ ಸಂಪುಟದಿಂದ ಕೈಬಿಟ್ಟಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.