ದೇಶದ ಪಂಚರಾಜ್ಯಗಳಲ್ಲಿ ಚುನಾವಣಾ ಕಾವು ಏರುತ್ತಲೇ ಸಾಗಿದ್ದು, ಮಧ್ಯ ಪ್ರದೇಶದಲ್ಲಿ ಬುಧವಾರ ಚುನಾವಣೆ ನಡೆಯುತ್ತಿದೆ.  2005ರಿಂದಲೂ ಸತತವಾಗಿ ಅಧಿಕಾರ ನಡೆಸುತ್ತಾ ಬಂದಿರುವ ಬಿಜೆಪಿ ಮತ್ತೊಮ್ಮೆ ರಾಜ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಭರವಸೆಯಲ್ಲಿದೆ. 

ಭೋಪಾಲ್ (ನ.28) : 227 ಸದಸ್ಯ ಬಲದ ಮಧ್ಯಪ್ರದೇಶದಲ್ಲಿ ಬುಧವಾರ [ನ.28] ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಬಹುತೇಕ ಚುನಾವಣಾ ಸಮೀಕ್ಷೆಗಳು ಬಿಜೆಪಿಯ ಗೆಲುವಿನ ಸುಳಿವು ನೀಡಿವೆ.

Add Asianetnews Kannada as a Preferred SourcegooglePreferred

ಇದೇ ವೇಳೆ 2005ರಿಂದಲೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅಲ್ಲದೇ ಈ ಬಾರಿ ರಾಜ್ಯದಲ್ಲಿ 100ಕ್ಕೆ 100ರಷ್ಟು ಬಿಜೆಪಿ ಗೆಲುವು ಪಡೆದು ಅಧಿಕಾರ ವಹಿಸಿಕೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಧ್ಯ ಪ್ರದೇಶದ ಬುದ್ನಿ ಮತಗಟ್ಟೆಯಲ್ಲಿ ಬುಧವಾರ [ನ.28] ಮತದಾನ ಮಾಡಿದ ಬಳಿಕ ಮಾತನಾಡಿದ ಸಿಎಂ, ಪಕ್ಷವು 200ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ನಂಬಿಕೆ ಇದೆ. ಬಿಜೆಪಿ ಸರ್ಕಾರ ಅನೇಕ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿ ಯಶಸ್ವಿಯಾಗಿವೆ. ಇದರಿಂದ ಜನತೆ ಮತ್ತೆ ಬಿಜೆಪಿ ಗೆಲುವಿಗೆ ಸಹಕರಿಸಲಿದ್ದು, ಬಹುಮತದೊಂದಿಗೆ ಅಧಿಕಾರ ಪಡೆಯುವುದು ಖಚಿತ. ಪಕ್ಷದ ಕಾರ್ಯಕರ್ತರೂ ಪಕ್ಷದ ಗೆಲುವಿಗೆ ಹೆಚ್ಚಿನ ಪ್ರಮಾಣದಲ್ಲಿ ಶ್ರಮಿಸಿದ್ದಾರೆ ಎಂದಿದ್ದಾರೆ. 

ಕೈ ವಾಗ್ದಾಳಿ:

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಕಮಲ್ ನಾಥ್, ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಜ್ಯದ ಜನತೆಯನ್ನು ಪಕ್ಷ ಲೂಟಿ ಹೊಡೆಯುತ್ತಿದೆ. ಈ ಬಾರಿ ಜನತೆ ತಮ್ಮನ್ನು ಲೂಟಿ ಮಾಡಿದವರಿಗೆ ಪಾಠ ಕಲಿಸುತ್ತಾರೆ ಎನ್ನುವ ನಂಬಿಕೆ ನಮಗಿದೆ ಎಂದಿದ್ದಾರೆ. 

ಮತದಾನದ ಬಳಿಕ ಕಮಲ್‌ನಾಥ್ ಮಾಧ್ಯಮದೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಬಹುಮತ ಪಡೆಯುವ ಭರವಸೆ ವ್ಯಕ್ತಪಡಿಸಿದ್ದಾರೆ. 

ಬುಧವಾರ ಬೆಳಗ್ಗೆ 7 ಗಂಟೆಯಿಂದಲೇ ಮಧ್ಯಪ್ರದೇಶದಲ್ಲಿ 227 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಡಿಸೆಂಬರ್ 11 ರಂದು ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಮೋಜೋರಾಂ ವಿಧಾನಸಭೆಗೂ ಬುಧವಾರ ಚುನಾವಣೆ ನಡೆಯುತ್ತಿದೆ.