ರಾಜ್ಯದ ಹಲವು ರಾಜಕೀಯ ಮುಖಂಡರ ಮೇಲೆ ಐಟಿ ದಾಳಿ ನಡೆದಿದ್ದು, ಲೋಕಸಭಾ ಚುನಾವಣೆ ಬೆನ್ನಲ್ಲೇ ಈ ದಾಳಿಯಾಗಿದೆ. ಇದೀಗ ಜೆಡಿಎಸ್ ಮುಖಂಡ ಎಚ್.ಡಿ ದೇವೇಗೌಡರ ಐಟಿ ದಾಳಿಯ ಬಗ್ಗೆ ಮಾತನಾಡಿದ್ದು, ಇದರ ಹಿಂದೆ ಬಿಜೆಪಿಯೇ ಕಾರಣ ಎಂದಿದ್ದಾರೆ. 

 ನವದೆಹಲಿ :  ‘ಕರ್ನಾಟಕದಲ್ಲಿ ನಮ್ಮ ಜತೆ ಸೇರಿ ಸರ್ಕಾರ ರಚಿಸಲು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮನವೊಲಿಕೆಗೆ ಬಿಜೆಪಿ ಯತ್ನಿಸಿತ್ತು. ಇನ್ನು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಕೂಡ ದಿಲ್ಲಿಯಲ್ಲಿ ನನ್ನನ್ನು ಭೇಟಿ ಮಾಡಲು ಯತ್ನಿಸಿದ್ದರು. ಆದರೆ ನಾನು ಅದಕ್ಕೆ ನಿರಾಕರಿಸಿದೆ. ಅದಕ್ಕೇ ಹಾಸನ ಹಾಗೂ ಮಂಡ್ಯದಲ್ಲಿ ನಮ್ಮನ್ನು ಗುರಿಯಾಗಿಸಿಕೊಂಡು ಆದಾಯ ತೆರಿಗೆ ದಾಳಿ ನಡೆದಿದೆ’ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಗಂಭೀರ ಆರೋಪ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ಎಎನ್‌ಐ ಸುದ್ದಿಸಂಸ್ಥೆಯ ಜತೆ ಗುರುವಾರ ಮಾತನಾಡಿದ ಅವರು, ‘ನಿನ್ನೆ ರಾತ್ರಿ 380 ಆದಾಯ ತೆರಿಗೆ ಅಧಿಕಾರಿಗಳು ಸಿಆರ್‌ಪಿಎಫ್‌ ಸಹಕಾರದಿಂದ ಬೆಂಗಳೂರಿಗೆ ಬಂದರು. ಅವರು ಹಾಸನ ಹಾಗೂ ಮಂಡ್ಯವನ್ನಷ್ಟೇ ಆಯ್ಕೆ ಮಾಡಿಕೊಂಡು ದಾಳಿ ನಡೆಸಿದರು. ಇದರ ಹಿಂದೆ ಒಂದು ಇತಿಹಾಸವೇ ಇದೆ’ ಎಂದು ಹೇಳಿದರು.

‘ಈ ಚುನಾವಣೆಗೂ ಮುನ್ನ ಕುಮಾರಸ್ವಾಮಿ ಅವರನ್ನು ಓಲೈಸಿ ಸರ್ಕಾರ ರಚನೆ ಮಾಡಲು ಬಿಜೆಪಿ ಯತ್ನಿಸಿತ್ತು. ಜೆಡಿಎಸ್‌ ಖರ್ಚಿಗಾಗಿ ಭಾರಿ ಪ್ರಮಾಣದ ಹಣದ ಆಮಿಷವನ್ನೂ ಬಿಜೆಪಿ ಒಡ್ಡಿತ್ತು. ಮುಂಬೈಗೆ ಕುಮಾರಸ್ವಾಮಿ ಅವರಿಗೆ ಬರಹೇಳಿ ಹಣವನ್ನೂ ತೆಗೆದಿರಿಸಿತ್ತು. ಆದರೆ ಕುಮಾರಸ್ವಾಮಿ ಅದಕ್ಕೆ ಬಗ್ಗಲಿಲ್ಲ. ಅಮಿತ್‌ ಶಾ ಅವರೂ ದಿಲ್ಲಿಯಲ್ಲಿ ನನ್ನನ್ನು ಭೇಟಿ ಮಾಡಲು ಯತ್ನಿಸಿದರು. ಆದರೆ ನಾನು ಅದಕ್ಕೆ ನಿರಾಕರಿಸಿದೆ. ಅದಕ್ಕೆಂದೇ ಹಾಸನ ಹಾಗೂ ಮಂಡ್ಯದಲ್ಲಿ ಐಟಿ ದಾಳಿ ನಡೆದಿದೆ’ ಎಂದು ಗೌಡರು ಆರೋಪಿಸಿದರು.