ಬಿಜೆಪಿಯಿಂದ ಅಕ್ಕಿ ಮುಷ್ಟಿ ಅಭಿಯಾನ : ಏನಿದು ಗೊತ್ತಾ..?
ರಾಜ್ಯ ವಿಧಾನಸಭಾ ಚುನಾವಣೆ ಚುನಾವಣಾ ಪ್ರಚಾರಾರ್ಥ ಈಗಾಗಲೇ ಮೂರು ಬಾರಿ ಕರ್ನಾಟಕಕ್ಕೆ ಬಂದುಹೋಗಿರುವ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮತ್ತೆ ರಾಜ್ಯಕ್ಕೆ ಆಗಮಿಸಲಿದ್ದು ದಾವಣಗೆರೆಯಲ್ಲಿ ನಡೆಯಲಿರುವ ರಾಜ್ಯ ಬಿಜೆಪಿ ರೈತ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಚುನಾವಣಾ ಪ್ರಚಾರಾರ್ಥ ಈಗಾಗಲೇ ಮೂರು ಬಾರಿ ಕರ್ನಾಟಕಕ್ಕೆ ಬಂದುಹೋಗಿರುವ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮತ್ತೆ ರಾಜ್ಯಕ್ಕೆ ಆಗಮಿಸಲಿದ್ದು ದಾವಣಗೆರೆಯಲ್ಲಿ ನಡೆಯಲಿರುವ ರಾಜ್ಯ ಬಿಜೆಪಿ ರೈತ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಈ ಬಗ್ಗೆ ಭಾನುವಾರದಂದು ಸುದ್ದಿಗಾರದೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಅಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಅವರ ಜನ್ಮ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ 4 ಗಂಟೆಗೆ ನಡೆಯಲಿರುವ ಕಾರ್ಯ ಕ್ರಮದಲ್ಲಿ ಪ್ರಧಾನಿ ಮೋದಿಯವರು ಯಡಿಯೂರಪ್ಪನವರನ್ನು ಸನ್ಮಾನಿಸಿ, ತೇಗದ ಮರದ ನೇಗಿಲನ್ನು ನೀಡಲಿದ್ದು, 15 ದಿನಗಳ ಮುಷ್ಟಿ ಅಕ್ಕಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿ ಕೇಂದ್ರಸ್ಥಾನದಲ್ಲೂ ಮುಷ್ಟಿ ಅಭಿಯಾನ ನಡೆಯಲಿದೆ. ಪ್ರತಿ ಕೇಂದ್ರದಲ್ಲೂ 100-150 ಗ್ರಾಮದ ರೈತರನ್ನು ಸೇರಿಸಿ, ಪ್ರತಿಜ್ಞೆ ಬೋಧಿಸುವುದೇ ಮುಷ್ಟಿ ಅಕ್ಕಿ ಅಭಿಯಾನದ ಗುರಿ, ಉದ್ದೇಶವಾಗಿದೆ. ಪ್ರತಿಯೊಬ್ಬ ರೈತರಿಗೂ ಎಂತಹದ್ದೇ ಪರಿಸ್ಥಿತಿ, ಸಂಕಷ್ಟದಲ್ಲೂ ಆತ್ಮಹತ್ಯೆ ದಾರಿ ಹಿಡಿಯುವುದಿಲ್ಲ ಎಂಬುದಾಗಿ ಪ್ರತಿಜ್ಞೆ ಬೋಧಿಸಲಾಗುವುದು. ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರ ದಿಂದಲೂ ರೈತರ ಮನೆಗಳಲ್ಲಿ ಅಕ್ಕಿ, ಗೋಧಿಯನ್ನು ಸಂಗ್ರಹಿಸುವ ಅಭಿಯಾನ ಇದಾಗಿದೆ. ಹೀಗೆ ರೈತರಿಂದ ಸಂಗ್ರಹಿಸಿದ ಅಕ್ಕಿ, ಗೋಧಿಯನ್ನು ಜಿಲ್ಲಾ ಕೇಂದ್ರಕ್ಕೆ ತರಲಾಗುವುದು.
ಆ ಬಳಿಕ ಮಠ, ಮಂದಿರ, ಧಾರ್ಮಿಕ ಅಥವಾ ಪುಣ್ಯಕ್ಷೇತ್ರಗಳಲ್ಲಿ ಅಡುಗೆ ಮಾಡುವ ಮೂಲಕ ರೈತರೊಂದಿಗೆ ಸೇರಿ ಊಟ ಮಾಡಿ ರೈತರಪರವಾಗಿ ನಾವು ಕೆಲಸ ಮಾಡುತ್ತೇವೆ ಎಂಬ ಸಂಕಲ್ಪ ಮಾಡಲಾಗುತ್ತದೆ ಎಂದು ಹೇಳಿದರು. 27ರಂದು ದಾವಣಗೆರೆ ತಾಲೂಕಿನ ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೆರೆಯಾಗಳಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ ರೈತ ರಂಗಸ್ವಾಮಿ ನಿವಾಸಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭೇಟಿ ನೀಡಿ, ಸಾಂತ್ವನ ಹೇಳಿದ ನಂತರವೇ ಸಮಾವೇಶಕ್ಕೆ ಆಗಮಿಸುವರು ಎಂದು ಮಾಹಿತಿ ನೀಡಿದರು.