ಸಿದ್ದಗಂಗಾ ಶ್ರೀಗಳಿಗೆ 'ಭಾರತ ರತ್ನ ಪ್ರಶಸ್ತಿ' ಆಮೀಷ; ಚರ್ಚೆಗೆ ಗ್ರಾಸವಾಯ್ತು ಮಾತೆ ಮಹಾದೇವಿ ವಿವಾದಾತ್ಮಕ ಹೇಳಿಕೆ
ಸಿದ್ಧಗಂಗಾ ಶ್ರೀಗಳಿಗೆ ಭಾರತರತ್ನ ಪ್ರಶಸ್ತಿ ಕೊಡಿಸುವ ಆಮಿಷ ಒಡ್ಡಲಾಗಿದೆ ಎಂದು ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬೆಂಗಳೂರು (ಸೆ.13): ಸಿದ್ಧಗಂಗಾ ಶ್ರೀಗಳಿಗೆ ಭಾರತರತ್ನ ಪ್ರಶಸ್ತಿ ಕೊಡಿಸುವ ಆಮಿಷ ಒಡ್ಡಲಾಗಿದೆ ಎಂದು ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಿಎಸ್ವೈ, ವಿ.ಸೋಮಣ್ಣ ಸೇರಿ ಕೆಲವರಿಂದ ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ಕೊಡಿಸುವ ಆಮಿಷ ಒಡ್ಡಲಾಗಿದೆ ಎಂದು ನಮಗೆ ಖಚಿತ ಮಾಹಿತಿ ಲಭ್ಯವಾಗಿದೆ ಎಂದ ಮಾತೆ ಮಹಾದೇವಿ ಹೇಳಿದ್ದಾರೆ.
ಸಿದ್ದಗಂಗಾ ಶ್ರೀಗಳಿಗೆ ವಯೋಮಾನದ ದೃಷ್ಟಿಯಿಂದ ನೆನಪಿನ ಶಕ್ತಿ ಇಲ್ಲ. ತುಮಕೂರಿಂದ ಬೆಂಗಳೂರು ಎಷ್ಟು ದೂರ ಇದೆ ಎಂದು ಶ್ರೀಗಳಿಗೆ ನೆನಪಿಲ್ಲ. ಹೀಗಾಗಿ ಅವರನ್ನ ಅನೇಕರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಪೀಠಾದ್ಯಕ್ಷೆ ಮಾತೆ ಮಹಾದೇವಿ ಹೇಳಿಕೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಪೂಜ್ಯ ಶ್ರೀಗಳ ಬಗ್ಗೆ ನಾನೆಂದೂ ಆರೋಪ ಮಾಡಿಲ್ಲ. ಅವರು ಆಮೀಷಕ್ಕೆ ಒಳಗಾಗಿದ್ದಾರೆ ಎಂದು ಎಲ್ಲೂ ಹೇಳಿಲ್ಲ. ಬಿಜೆಪಿಯವರು ರಾಜಕೀಯ ದೃಷ್ಟಿಯಿಂದ ಈ ರೀತಿಯಾದ ಆಮೀಷ ಒಡ್ಡಿದ್ದಾರೆ ಎಂದು ತಮ್ಮ ಮಾತಿಗೆ ಸ್ಪಷ್ಟನೆ ನೀಡಿದ್ದಾರೆ.
ಮಾತೆ ಮಹಾದೇವಿ ಹೇಳಿಕೆಯನ್ನು ಖಂಡಿಸಿ ಬೆಂಗಳೂರಿನಲ್ಲಿರುವ ಅವರ ಮಠದ ಎದುರು ಪ್ರತಿಭಟನೆ ನಡೆಸಲಾಗಿದೆ. ವೀರಶೈವ ಸಮಾಜದವರು ಟೈರ್'ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತೆ ಮಹಾದೇವಿ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದಾರೆ.